ಸರ್ಕಾರದ ಗ್ಯಾರಂಟಿಗೆ ಆಧಾರ್ ತೊಡಕು; ಅಪ್​ಡೇಟ್​ಗೆ ದಾಖಲೆ ಹೊಂದಿಸುವುದೇ ಸವಾಲು

ಸರ್ಕಾರದ ಗ್ಯಾರಂಟಿಗೆ ಆಧಾರ್ ತೊಡಕು; ಅಪ್​ಡೇಟ್​ಗೆ ದಾಖಲೆ ಹೊಂದಿಸುವುದೇ ಸವಾಲು

ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಒಂದೊಂದಾಗಿ ಅನುಷ್ಠಾನಗೊಳಿಸುತ್ತಿದ್ದು, ಈ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಅಡ್ಡಿಯಾಗಿದೆ. ದಿನ ಬೆಳಗಾದರೆ ಆಧಾರ್ ಅಪ್​ಡೇಟ್ ಮಾಡಿಸಲು ಸೇವಾ ಕೇಂದ್ರಗಳ ಮುಂದೆ ಜನರು ಗಂಟೆಗಟ್ಟಲೇ ನಿಲ್ಲಬೇಕಾಗಿದೆ.



ಆಧಾರ್ ಕಾರ್ಡ್ ವಿತರಿಸುವಾಗ ಸೇವಾ ಕೇಂದ್ರಗಳ ಪ್ರತಿನಿಧಿಗಳು ಫೋಟೋ, ಬೆರಳಚ್ಚು, ರೆಟಿನಾ ಮತ್ತು ಹೆಸರು, ವಿಳಾಸ ಪಡೆದು ಹುಟ್ಟಿದ ದಿನಾಂಕ, ಮೊಬೈಲ್ ನಂಬರ್​ಗಳನ್ನು ಮನಸ್ಸಿಗೆ ಬಂದಂತೆ ತುಂಬಿ ಕಾರ್ಡ್ ವಿತರಿಸಿದ ಆರೋಪವಿದೆ. ಈ ಕಾರಣದಿಂದಾಗಿ ಫಲಾನುಭವಿಗಳಿಗೆ ಒಟಿಪಿ ಇಲ್ಲದೆ, ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಗೃಹಜ್ಯೋತಿಗೆ ಅರ್ಜಿ ಸಲ್ಲಿಸುವಾಗ ಆಧಾರ್ ನಂಬರ್ ಜತೆ ಲಿಂಕ್ ಆಗಿರುವ ಮೊಬೈಲ್​ಗೆ

ಬರುವ ಒಟಿಪಿ ನಂಬರ್ ಅಪ್​ಲೋಡ್ ಮಾಡಬೇಕಾಗಿದೆ. 5 ಕೆಜಿ ಅಕ್ಕಿ ಬದಲಿಗೆ 170 ರೂ.ಗಳನ್ನು ನೇರವಾಗಿ ಪಡಿತರದಾರನ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ. ರೇಷನ್ ಕಾರ್ಡ್​ಗೂ ಆಧಾರ್(ಕೆವೈಸಿ) ಲಿಂಕ್ ಆಗಿರಬೇಕು. ಆಧಾರ್ ಜತೆಗೆ ಬ್ಯಾಂಕ್ ನಂಬರ್ ಸಂಯೋಜನೆ ಆಗಿದ್ದರೆ ಮಾತ್ರ ಹಣ ಬರಲಿದೆ. ಹೀಗಾಗಿ ಸಾಕಷ್ಟು ಜನರ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ.


ಗೃಹಲಕ್ಷ್ಮಿ ಯೋಜನೆಗೂ ಆಧಾರ್ ಬೇಕಾಗಿದೆ. ಸಾಕಷ್ಟು ಜನರ ಆಧಾರ್ ಕಾರ್ಡ್​ನಲ್ಲಿ ವಿಳಾಸ, ಹುಟ್ಟಿದ ದಿನಾಂಕ ವ್ಯತ್ಯಾಸವಾಗಿದೆ. ಮೊಬೈಲ್ ನಂಬರ್ ಸೇರಿ ಕೆವೈಸಿ ಅಪ್​ಡೇಟ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳು ಆಧಾರ್ ಅಪ್​ಡೇಟ್ ಮಾಡಿಸಲು ಸೇವಾ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ.


ಪ್ರತಿ ಸೇವಾ ಕೇಂದ್ರವು ದಿನಕ್ಕೆ 60 ಜನರ ಕಾರ್ಡ್ ಮಾತ್ರ ಅಪ್​ಡೇಟ್ ಮಾಡುತ್ತಿವೆ. ಇದಕ್ಕಾಗಿ ಟೋಕನ್ ಪಡೆಯಲು ಬೆಳಗ್ಗೆ 5 ಗಂಟೆಗೆ ಜನ ಸಾಲಿನಲ್ಲಿ ನಿಲ್ಲುತ್ತಿದ್ದು, ಟೋಕನ್ ಸಿಕ್ಕ ಮೇಲೆ ಅರ್ಜಿ ನಮೂನೆಗೂ ಸಾಲು ನಿಲ್ಲಬೇಕಿದೆ. ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಬೆರಳಚ್ಚು ಮತ್ತು ಕಣ್ಣಿನ ರೆಟಿನಾ ಸ್ಕಾ್ಯನಿಂಗ್​ನ ದತ್ತಾಂಶ ಸೇರಿ ಮಾಹಿತಿ ಅಪ್​ಡೇಟ್​ಗಾಗಿಯೂ ಜನರು ಸೇವಾ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ದುಡಿಯುವ ವರ್ಗ ವಾರ ಪೂರ್ತಿ ಕಚೇರಿ ಮತ್ತು ಕಾರ್ಯಭಾರಗಳ ನಡುವೆ ಇದೀಗ ಆಧಾರ್ ಸಂಕೋಲೆಯಲ್ಲಿ ಸಿಲುಕಿಕೊಂಡಿದೆ.


ಬಿತ್ತನೆ ಕಾಲದಲ್ಲಿ ರೈತಾಪಿ ವರ್ಗವೂ ಆಧಾರ್ ಪರಿಷ್ಕರಣೆ ಜಂಜಾಟ ಎದುರಿಸಬೇಕಿದೆ. ಮತ್ತೊಂದೆಡೆ, 5 ಮತ್ತು 15 ವರ್ಷ ತುಂಬಿರುವ ವಿದ್ಯಾರ್ಥಿಗಳು ದತ್ತಾಂಶ ಪರಿಷ್ಕರಣೆ ಕಡ್ಡಾಯ ವಾಗಿರುವ ಕಾರಣಕ್ಕೆ ತರಗತಿ ಬಿಟ್ಟು ಬರಬೇಕಾಗಿದೆ.

ವೃದ್ಧಾಪ್ಯ ವೇತನದಿಂದ ವಂಚಿತರು : ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು 60 ವರ್ಷ ತುಂಬಿದವರಿಗೆ ಸಾಧ್ಯವಾಗುತ್ತಿಲ್ಲ. ಈ ಮೊದಲು ವೈದ್ಯರ ದೃಢೀಕರಣ ಪತ್ರ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಆಧಾರ್ ಅಥವಾ ವೋಟರ್ ಐಡಿ ಪಡೆದು ಅರ್ಜಿ ಸ್ವೀಕರಿಸಲಾಗುತ್ತಿತ್ತು. ಇದೀಗ ಆಧಾರ್ ಕಡ್ಡಾಯ ಮಾಡಿದ್ದು, ಆಧಾರ್​ನಲ್ಲಿ ಹುಟ್ಟಿದ ದಿನಾಂಕ ಹೊಂದಾಣಿಕೆಯಾಗದಿದ್ದರೆ ಅಪ್​ಡೇಟ್ ಮಾಡಿಸಲು ಕೇಂದ್ರ ಸರ್ಕಾರ ಎಸ್​ಎಸ್​ಎಲ್​ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ ಮತ್ತು ಪಿಂಚಣಿ ಸರ್ಟಿಫಿಕೇಟ್ ಕಡ್ಡಾಯ ಮಾಡಿದೆ. ಈ ದಾಖಲೆಗಳು ಇಲ್ಲದೆ, ವೃದ್ಧರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.


Aadhar Pan Link

ಆಧಾರ್, ಪಾನ್ ಕಾರ್ಡ್ ಲಿಂಕ್ ಸಮಸ್ಯೆ

ಆಧಾರ್ ಮತ್ತು ಪಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಸಾಮಾನ್ಯ ದಾಖಲೆ ಪಡೆದು ವಿತರಿಸಲಾಗಿದೆ. ಇದೀಗ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಕಡ್ಡಾಯ ಮಾಡಲಾಗಿದೆ. ಎರಡು ಕಾರ್ಡ್​ಗಳ ಪೈಕಿ ಒಂದರಲ್ಲಿ ಹೆಸರು ಅಥವಾ ಹುಟ್ಟಿದ ದಿನಾಂಕದಲ್ಲಿ ವ್ಯತ್ಯಾಸ ಕಂಡು ಬಂದರೆ ಲಿಂಕ್ ಆಗುತ್ತಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ ದಾಖಲೆ ಒದಗಿಸಲು ಜನರು ಪರದಾಡುತ್ತಿದ್ದಾರೆ.

ಆಧಾರ್​ನಲ್ಲಿನ ಮಾಹಿತಿ ಅಪ್​ಡೇಟ್​ಗೂ ಕಠಿಣ ಷರತ್ತು ವಿಧಿಸಲಾಗಿದೆ. ಹುಟ್ಟಿದ ದಿನಾಂಕ ತಿದ್ದುಪಡಿಗೆ ಎಸ್​ಎಸ್​ಎಲ್​ಸಿ ಅಂಕಪಟ್ಟಿ, ಜನನ ಪ್ರಮಾಣಪತ್ರ, ಪಿಂಚಣಿ ಸರ್ಟಿಫಿಕೇಟ್ ಕಡ್ಡಾಯ ಮಾಡಿದ್ದು, ಜನರಿಗೆ ಸಂಕಷ್ಟವಾಗಿದೆ.


Post a Comment

Previous Post Next Post
CLOSE ADS
CLOSE ADS
×