ಯಶವಂತಪುರ-ವಿಜಯಪುರ ನಡುವಿನ ನೂತನ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರದಿಂದಾಗಿ ಪ್ರಯಾಣದ ಅವಧಿ 11 ತಾಸಿಗೆ ಇಳಿಕೆಯಾಗಿದ್ದು, ಹಾವೇರಿ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಿದೆ. ಇದರ ಜೊತೆಗೆ ಈ ಭಾಗದಲ್ಲಿನ ಐತಿಹಾಸಿಕ, ಧಾರ್ಮಿಕ ಸ್ಥಳ ವೀಕ್ಷಿಸಲು ಸಂಪರ್ಕ ವ್ಯವಸ್ಥೆ ಉತ್ತಮವಾಗಿದೆ, ಆದಾಗ್ಯೂ,ಈ ರೈಲು ಗದಗ ಬೈಪಾಸ್ ಮೂಲಕ ಸಂಚರಿಸಿ ನಿಲ್ದಾಣದಲ್ಲಿ ನಿಲುಗಡೆ ನೀಡದಿರುವುದಕ್ಕೆ ಸ್ಥಳೀಯ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಾಗಾದ್ರೆ, ಈ ಯಶವಂತಪುರ-ವಿಜಯಪುರ ರೈಲು ಸಂಚಾರದ ಮಾರ್ಗ ಹಾಗೂ ವೇಳಾಪಟ್ಟಿ ಕುರಿತ ಮಾಹಿತಿ ಇಲ್ಲಿದೆ.

ಯಶವಂತಪುರ-ವಿಜಯಪುರ ನೂತನ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ, ಹಾವೇರಿ ಸೇರಿ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಲಾಭ.ರೈಲು ಸಂಪರ್ಕ ಜಾಲಕ್ಕೆ ಬಲದಿಂದ ಐತಿಹಾಸಿಕ, ಧಾರ್ಮಿಕ ಸ್ಥಳ ವೀಕ್ಷಿಸಲು ಅನುಕೂಲ.ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ ಹೀಗಿದೆ..

ಬೆಂಗಳೂರು ಮತ್ತು ಉತ್ತರ ಕರ್ನಾಟಕ ನಡುವಿನ ರೈಲು ಸಂಪರ್ಕ ಮತ್ತಷ್ಟು ಬಲವಾಗುವ ನಿಟ್ಟಿನಲ್ಲಿ ಯಶವಂತಪುರ-ವಿಜಯಪುರ ನೂತನ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ ಮೇ 16ರಿಂದ ಆರಂಭಗೊಂಡಿದೆ. ಈ ರೈಲು ಸೇವೆಯಿಂದ ಹಾವೇರಿ ಜಿಲ್ಲೆಯ ಪ್ರಯಾಣಿಕರಿಗೆ ವಿಜಯಪುರಕ್ಕೆ ನೇರ ಸಂಪರ್ಕ ದೊರೆತಿರುವ ಸಂತಸ ಒಂದೆಡೆಯಾದರೆ, ಮತ್ತೊಂದೆಡೆ ವಿಜಯಪುರ ಹಾಗೂ ಬಾಗಲಕೋಟೆ ಭಾಗದ ಜನರಿಗೆ ಸುಮಾರು 11 ತಾಸಿನಲ್ಲಿ ಬೆಂಗಳೂರಿಗೆ ತಲುಪುವ ಅವಕಾಶ ಸಿಕ್ಕಿದೆ.

ಹಾವೇರಿ, ವಿಜಯಪುರ ಹಾಗೂ ಬಾಗಲಕೋಟೆ ಪ್ರಯಾಣಿಕರಿಗೆ ಲಾಭ

ಹಾವೇರಿ ಹಾಗೂ ಸುತ್ತಲಿನ ಜನರು ಹುಬ್ಬಳ್ಳಿ, ಗದಗಕ್ಕೆ ಪ್ರಯಾಣಿಸುವ ಅವಕಾಶವನ್ನು ಹೊಸ ರೈಲು ಸೇವೆಯಿಂದ ಅಲಭ್ಯವಾಗಿದೆ. ಆದರೆ, ವಿಜಯಪುರಕ್ಕೆ ತೆರಳಲು ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಿದೆ. ಹಾವೇರಿಗರು ಈ ಮಾರ್ಗದ ಮೂಲಕ ಬದಾಮಿ ಬನಶಂಕರಿ, ಜೈನಬಸದಿ, ಐಹೊಳೆ-ಪಟ್ಟದಕಲ್ಲು, ಶಿವಯೋಗ ಮಂದಿರ, ಗೋಲ್‌ಗುಂಬಜ್‌, ಬಾರಾಕಮಾನ್‌ ಸೇರಿದಂತೆ ಅನೇಕ ಧಾರ್ಮಿಕ, ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸಬಹುದಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಈ ಮಾರ್ಗಗಳಲ್ಲಿ ಬರುವ ನಗರಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ನೀಡುವ ಸಂಸ್ಥೆಗಳು ಇರುವುದರಿಂದ ಯುವಕ-ಯುವತಿಯರು ಹಾಗೂ ಅವರ ಪಾಲಕರಿಗೆ ಅನುಕೂಲವಾಗಲಿದೆ.

ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಪ್ರಯಾಣಿಕರು ಈ ರೈಲು ಸೇವೆಯನ್ನು ಸ್ವಾಗತಿಸಿದ್ದು, ನೇರ ಸಂಪರ್ಕದಿಂದ ಪ್ರಯಾಣದ ಸಮಯ ಮತ್ತು ವೆಚ್ಚ ಎರಡೂ ಕಡಿಮೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೈಲು ರಾತ್ರಿ ವೇಳೆಯಲ್ಲಿ ಸಂಚರಿಸುವುದರಿಂದ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಬೆಂಗಳೂರಿಗೆ ತೆರಳುವವರಿಗೆ ಹೆಚ್ಚು ಅನುಕೂಲವಾಗುತ್ತಿದೆ.

ವಿಜಯಪುರ ಮತ್ತು ಬಾಗಲಕೋಟೆ ಭಾಗದ ಪ್ರಯಾಣಿಕರು ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸಲು ಬರೋಬ್ಬರಿ 15 ತಾಸು ತಗುಲುತ್ತಿತ್ತು. ಹೊಸ ರೈಲು ಸಂಚಾರದಿಂದ ಪ್ರಯಾಣದ ಅವಧಿ 11-12 ತಾಸಿಗೆ ಇಳಿಕೆಯಾಗಿದ್ದು ಈ ಭಾಗದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಿದೆ.

ಗದಗದ ರೈಲು ನಿಲ್ದಾಣದಲ್ಲಿ ನಿಲುಗಡೆ ಇಲ್ಲದ್ದರಿಂದ ವಿರೋಧ

ಬೈಪಾಸ್‌ ಮೂಲಕ ಸಂಚರಿಸುವುದರಿಂದ ಹುಬ್ಬಳ್ಳಿ ಮತ್ತು ಗದಗ ನಿಲ್ದಾಣಗಳಲ್ಲಿ ನಿಲುಗಡೆ ನೀಡದಿರುವುದು ಗದಗ ಭಾಗದ ಪ್ರಯಾಣಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಗದಗ ಮತ್ತು ಪ್ರಯಾಣಿಕರ ಅಭಿಪ್ರಾಯದಂತೆ, ಗದಗ ಉತ್ತರ ಕರ್ನಾಟಕದ ಪ್ರಮುಖ ರೈಲು ನಿಲ್ದಾಣವಾಗಿದ್ದು, ಅಲ್ಲಿಗೂ ತಲುಪಿ ನಿಲುಗಡೆ ಮಾಡಿದ್ದರೆ ಹೆಚ್ಚಿನ ಸಂಖ್ಯೆಯ ಜನರಿಗೆ ಪ್ರಯೋಜನವಾಗಲಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿಯೂ ನಿಲುಗಡೆಗಾಗಿ ಬೇಡಿಕೆ ಕೇಳಿಬರುತ್ತಿದೆ. ಕೆಲ ಸಂಘಟನೆಗಳು ಹಾಗೂ ಸಾರ್ವಜನಿಕರು ನೈಋುತ್ಯ ರೈಲ್ವೆಗೆ ಮನವಿಯನ್ನೂ ಸಲ್ಲಿಸಿದ್ದಾರೆ.

ರೈಲ್ವೆ ಸಚಿವಾಲಯ ಹೊಸ ರೈಲುಗಳ ಆರಂಭಿಕ ಹಂತದಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ಮತ್ತು ಆದಾಯ ಆಧರಿಸಿ ನಿಲುಗಡೆಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಗದಗ ನಿಲ್ದಾಣದಲ್ಲಿ ನಿಲುಗಡೆ ಮಂಜೂರಾಗಬಹುದೇ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ. ಒಟ್ಟಾರೆ, ಏನೇ ಇರಲಿ ಯಶವಂತಪುರ-ವಿಜಯಪುರ ರೈಲು ಉತ್ತರ ಕರ್ನಾಟಕಕ್ಕೆ ಮತ್ತೊಂದು ಮಹತ್ವದ ಸಂಪರ್ಕ ಕಲ್ಪಿಸಿದೆ.

ರೈಲಿನ ಸಂಚಾರ ಮಾರ್ಗ ಹಾಗೂ ವೇಳಾಪಟ್ಟಿ ಹೀಗಿದೆ..

* ರೈಲು ಸಂಚಾರದ ಮಾರ್ಗ- ಪ್ರತಿ ಶನಿವಾರ ಮತ್ತು ಸೋಮವಾರ ಯಶವಂತಪುರದಿಂದ ವಿಜಯಪುರಕ್ಕೆ ಹಾಗೂ ಪ್ರತಿ ಭಾನುವಾರ ಮತ್ತು ಮಂಗಳವಾರ ವಿಜಯಪುರದಿಂದ ಯಶವಂತಪುರಕ್ಕೆ ಈ ರೈಲು ಸಂಚಾರ ಇರಲಿದೆ. ಯಶವಂತಪುರ (ಬೆಂಗಳೂರು)-ತುಮಕೂರು- ದಾವಣಗೆರೆ ಮಾರ್ಗವಾಗಿ ಹಾವೇರಿಗೆ ಬರುವ ಈ ರೈಲು ಬಳಿಕ ಗೂಡ್ಸ್‌ ರೈಲು ಮಾರ್ಗ ಬಳಸಿ ಗದಗ ಬೈಪಾಸ್‌ ಮೂಲಕ ಬದಾಮಿ, ಬಾಗಲಕೋಟೆ ಮೂಲಕ ವಿಜಯಪುರಕ್ಕೆ ತೆರಳುತ್ತದೆ. ವಿಜಯಪುರದಿಂದ ಯಶವಂತಪುರಕ್ಕೆ ಸಂಚರಿಸುವ ರೈಲು ಸಹ ಇದೇ ಮಾರ್ಗ ಅನುಸರಿಸುತ್ತಿದೆ.

* ಯಶವಂತಪುರ ಟು ವಿಜಯನಗರ ರೈಲಿನ ಟೈಮಿಂಗ್ಸ್- ನೂತನ ವಿಶೇಷ ರೈಲು ಪ್ರತಿ ಶನಿವಾರ ಮತ್ತು ಸೋಮವಾರ ಸಂಜೆ 6.15ಕ್ಕೆ ಯಶವಂತಪುರದಿಂದ ಹೊರಟು 7 ಗಂಟೆಗೆ ತುಮಕೂರು ಬಳಿಕ 8.10ಕ್ಕೆ ಅರಸಿಕೆರೆ ತಲುಪಲಿದೆ. ಅಲ್ಲಿ ವಾಟರಿಂಗ್‌ ಕಾರ್ಯ ಪೂರೈಸಿಕೊಂಡು ರಾತ್ರಿ 10.20ಕ್ಕೆ ದಾವಣಗೆರೆ, 11.22ಕ್ಕೆ ಹಾವೇರಿ ತಲುಪಲಿದೆ. ಬಳಿಕ ಬೆಳಗಿನಜಾವ 2.30ಕ್ಕೆ ಬದಾಮಿ, 3.10ಕ್ಕೆ ಬಾಗಲಕೋಟೆ ಮೂಲಕ 5.15ಕ್ಕೆ ವಿಜಯಪುರ ತಲುಪಲಿದೆ.

*‌ ವಿಜಯನಗರ ಟು ಯಶವಂತಪುರ ರೈಲಿನ ಟೈಮಿಂಗ್ಸ್- ಪ್ರತಿ ಭಾನುವಾರ ಮತ್ತು ಮಂಗಳವಾರ ಸಂಜೆ 5 ಗಂಟೆಗೆ ವಿಜಯಪುರದಿಂದ ಹೊರಟು 6.23ಕ್ಕೆ ಬಾಗಲಕೋಟೆ, 9.33ಕ್ಕೆ ಹಾವೇರಿ, 10.33ಕ್ಕೆ ದಾವಣಗೆರೆ ಮೂಲಕ ಸಂಚರಿಸಿ ಮರುದಿನ ಬೆಳಗಿನ ಜಾವ 4.10ಕ್ಕೆ ಯಶವಂತಪುರ ತಲುಪಲಿದೆ.

"ಯಶವಂತಪುರ-ವಿಜಯಪುರ ವಿಶೇಷ ರೈಲಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ವಿಶೇಷವಾಗಿ ವಿಜಯಪುರ ಮತ್ತು ಬಾಗಲಕೋಟೆ ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ ಸಮಸ್ಯೆ ಪರಿಹಾರವಾಗಿದೆ."