Gruha Jyothi Scheme: ಕೊನೆಯ ದಿನಾಂಕ ಹತ್ತಿರ ಬರ್ತಿದೆ, ನೀವಿನ್ನೂ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿಲ್ವಾ; ಇಲ್ಲಿದೆ ನೋಡಿ ಸುಲಭ ಮಾರ್ಗ

 ಗೃಹಜ್ಯೋತಿ ಯೋಜನೆಗೆ (Gruha Jyothi Scheme) ಜುಲೈ 26, 27ರವರೆಗೆ ಅರ್ಜಿ ಸಲ್ಲಿಸಬಹುದು. ಆದರೆ ಎಷ್ಟೋ ಮಂದಿ ಇನ್ನೂ ಅರ್ಜಿ ಸಲ್ಲಿಸಿಲ್ಲ. ನೋಂದಣಿ ಪ್ರಕ್ರಿಯೆ ಹೇಗೆ? ಏನೆಲ್ಲಾ ದಾಖಲೆಗಳು ಬೇಕು? ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.



ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ 200 ಯುನಿಟ್​ ಉಚಿತ ವಿದ್ಯುತ್​ ನೀಡುವ ಗೃಹ ಜ್ಯೋತಿ ಯೋಜನೆಗೆ (Gruha Jyothi Scheme) ಜುಲೈ 26, 27ರವರೆಗೆ ಅರ್ಜಿ ಸಲ್ಲಿಸಬಹುದು. ಜುಲೈ ತಿಂಗಳ ಬಿಲ್, ಆಗಸ್ಟ್​ ಮೊದಲ ವಾರ ಬರಲಿದೆ. ಆದರೆ ಇನ್ನೂ ಎಷ್ಟೋ ಮಂದಿ ಈ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಈ ಪ್ರಕ್ರಿಯೆ ಹೇಗೆ? ಎಂಬ ಮಾಹಿತಿ ಎಷ್ಟೋ ಜನರಿಗೆ ಗೊತ್ತಿಲ್ಲ. ಅದಕ್ಕುತ್ತರ ಕೊಡುವ ಮತ್ತು ಅರ್ಜಿ ಸಲ್ಲಿಸಲು ಸುಲಭ ಮಾರ್ಗ ನೀಡುವ ಪ್ರಯತ್ನ ನಮ್ಮದು.

ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯೂನಿಟ್‌ ಉಚಿತ ವಿದ್ಯುತ್ ನೀಡುವ 'ಗೃಹಜ್ಯೋತಿ' ಯೋಜನೆಯ ಫಲಾನುಭವಿಯಾಗಲು ಈಗಲೇ ಅರ್ಜಿ ಸಲ್ಲಿಸಿ. ಏಕೆಂದರೆ ಜುಲೈ 26, 27 ಕೊನೆಯ ದಿನಾಂಕವಾಗಿದೆ. ಆದರೆ ಇದು ಜುಲೈ ತಿಂಗಳಿಗೆ ಸಂಬಂಧಿಸಿದಂತೆ ಮಾತ್ರ. ಅದಕ್ಕೆ ಸೇವಾ ಸಿಂಧು ಪೋರ್ಟಲ್​​ನಲ್ಲಿ ನೀವೇ ಅರ್ಜಿಯನ್ನು ಸಲ್ಲಿಸಬಹುದು.

ಸೇವಾ ಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಿ

ಸೇವಾ ಸಿಂಧು ( https://sevasindhugs.karnataka.gov.in/ ) ಈ ವೆಬ್​ಸೈಟ್​ ಅನ್ನು ಸ್ಮಾರ್ಟ್​​ಫೋನ್​, ಕಂಪ್ಯೂಟರ್‌, ಲ್ಯಾಪ್‌ಟಾಪ್​ಗಳ ಮೂಲಕ ಸರಳವಾಗಿ ನೋಂದಣಿ ಮಾಡಿಕೊಳ್ಳಬಹುದು.


ಏನೆಲ್ಲಾ ದಾಖಲೆಗಳು ಬೇಕು?

ನೀವು ಫಲಾನುಭವಿ ಆಗಬೇಕೆಂದರೆ ತಮ್ಮ ಆಧಾರ್ ಕಾರ್ಡ್, ಸದ್ಯ ನಿಮ್ಮ ಮನೆಯ ವಿದ್ಯುತ್​ ಬಿಲ್​​ನಲ್ಲಿರುವ ಗ್ರಾಹಕರ ಖಾತೆ ಐಡಿ ಕಡ್ಡಾಯವಾಗಿ ಬೇಕು.


ಎಲ್ಲಿಲ್ಲಿ ನೋಂದಣಿ?

ಸಾಕಷ್ಟು ಮಂದಿಗೆ ಇನ್ನೂ ಗೊಂದಲ ಇದೆ. ಗೃಹ ಜ್ಯೋತಿ ಯೋಜನೆಗೆ ಎಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು. ಅದಕ್ಕೆ ಇಲ್ಲಿದೆ ನೋಡಿ ಉತ್ತರ. ಬೆಂಗಳೂರು ಒನ್ ಸೆಂಟರ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಯಾವುದೇ ವಿದ್ಯುತ್ ಕಚೇರಿಯಲ್ಲೂ ಸಹ ನೋಂದಾವಣಿ ಮಾಡಿಕೊಂಡು ಫಲಾನುಭವಿಗಳು ಆಗಬಹುದು.


ಕುಂದು ಕೊರತೆಗೆ ಈ ನಂಬರ್​ಗೆ ಸಂಪರ್ಕಿಸಿ

ಹಾಗೆಯೇ ಈ ಯೋಜನೆಗೆ ಸಂಬಂಧಿಸಿ ಕುಂದು ಕೊರತೆ ಏನೇ ಇದ್ದರೂ ವಿದ್ಯುತ್​ ಕಚೇರಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಅಥವಾ ಸಾರ್ವಜನಿಕರಿಗಾಗಿ ದಿನದ 24 ಗಂಟೆಯೂ ಕೆಲಸ ಮಾಡುವ ಸಹಾಯವಾಣಿ 1912ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು

ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಸೇವಾ ಸಿಂಧು ಪೋರ್ಟಲ್ sevasindhugs.karnataka.gov.in ನೇರವಾಗಿ ನಿಮಗೆ ಸರ್ಕಾರ 5 ಗ್ಯಾರಂಟಿಗಳಿಗೆ ಅರ್ಜಿ ಸಲ್ಲಿಸುವ ಪೋರ್ಟಲ್​ ಓಪನ್ ಆಗುತ್ತದೆ.

ಅಲ್ಲಿ ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಆಯ್ಕೆಗಳು ಕಾಣುತ್ತವೆ. ಇಲ್ಲಿ ಗೃಹ ಜ್ಯೋತಿ ಆಯ್ಕೆ ಮಾಡಬೇಕು. ಅರ್ಜಿ ಸಲ್ಲಿಸಲು ಎರಡು ಭಾಷೆಗಳ ಆಯ್ಕೆ ನೀಡಲಾಗಿದೆ.

ಮೊದಲಿಗೆ ಆಧಾರ್ ಕಾರ್ಡ್​​ ನಂಬರ್ ತುಂಬಬೇಕು. ನಂತರ ಬರುವ ಒಟಿಪಿಯನ್ನು ಭರ್ತಿ ಮಾಡಬೇಕು. ಆ ಬಳಿಕ ಅರ್ಜಿ ತುಂಬಲು ಅವಕಾಶ ನೀಡುತ್ತದೆ.

ನಂತರ 8 ಕಲಂಗಳಲ್ಲಿ ಮಾಹಿತಿ ತುಂಬಾ ಬೇಕು. ಅರ್ಜಿ ತುಂಬುವ ಮುನ್ನ ನಿಮ್ಮ ವಿದ್ಯುತ್ ಬಿಲ್​ ಹಾಗೂ ಆಧಾರ್ ಕಾರ್ಡ್​ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಯನ್ನು ನಿಮ್ಮ ಬಳಿ ಇಟ್ಟುಕೊಂಡರೆ ಅರ್ಜಿಯನ್ನು ವೇಗವಾಗಿ ತುಂಬಬಹುದು.

ಮೊದಲ ಆಯ್ಕೆಯಲ್ಲಿ ನೀವು ನಿಮ್ಮ ಎಸ್ಕಾಂ (ಬೆವಿಕಂ, ಚಾವಿಸನಿನಿ, ಜೆಸ್ಕಾಂ, ಹೆಸ್ಕಾಂ, ಹುಕ್ಕೇರಿ ಸೊಸೈಟಿ) ಹೆಸರು ಆಯ್ಕೆ ಮಾಡಿಕೊಳ್ಳಬೇಕು.

ಮತ್ತೊಂದು ಕಲಂನಲ್ಲಿ ಖಾತೆ ಸಂಖ್ಯೆ ನಮೂದಿಸಬೇಕು

ಮತ್ತೊಂದು ಕಲಂನಲ್ಲಿ ಖಾತೆದಾರರ ಹೆಸರನ್ನು ತುಂಬಬೇಕು (ನಿಮ್ಮ ವಿದ್ಯುತ್​ನಲ್ಲಿ ಇರುವಂತೆ), ಹಾಗೆಯೇ ಖಾತೆದಾರರ ವಿಳಾಸವನ್ನು ತುಂಬಬೇಕು (ನಿಮ್ಮ ವಿದ್ಯುತ್​ನಲ್ಲಿ ಇರುವಂತೆ) ಇನ್ನೊಂದು ಕಲಂನಲ್ಲಿ ತುಂಬಬೇಕು.

ನಂತರ ಬಳಕೆದಾರರ ವಿಧ, ಆಧಾರ್​ ಸಂಖ್ಯೆ, ಅರ್ಜಿದಾರರ ಹೆಸರು (ಬಾಡಿಗೆದಾರರು ಆಗಿದ್ದರೆ, ಮಾಲೀಕರ ಹೆಸರು), ದೂರವಾಣಿ ಸಂಖ್ಯೆ ನಮೂದಿಸಬೇಕು. ಕೊನೆಯಲ್ಲಿ ನೀವು ಘೋಷಣೆ ಮಾಡಬೇಕಾಗುತ್ತದೆ.

ಆಗಸ್ಟ್​ 1ರಿಂದಲೇ ಜಾರಿ

ಗೃಹ ಜ್ಯೋತಿ ಯೋಜನೆಯು ಆಗಸ್ಟ್ 1 ರಿಂದ (ಜುಲೈನಲ್ಲಿ ವಿದ್ಯುತ್ ಬಳಕೆ ಮಾಡಿರುವ ಹಿನ್ನೆಲೆ) ಜಾರಿಗೆ ಬರಲಿದೆ. 200 ಯುನಿಟ್​ ವಿದ್ಯುತ್ ಅಥವಾ ಅದಕ್ಕಿಂತ ಕಡಿಮೆ ಯುನಿಟ್ ಬಳಸುವವರು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ.

ಶೇ 10ರಷ್ಟು ಉಚಿತ ಸಿಗಲಿದೆ

ತಿಂಗಳಿಗೆ ಗರಿಷ್ಠ 200 ಯುನಿಟ್‌ವರೆಗೆ, ಕಳೆದ ಹಣಕಾಸು ವರ್ಷದಲ್ಲಿ ಪ್ರತಿ ಗ್ರಾಹಕ ತಿಂಗಳ ಸರಾಸರಿ ಬಳಕೆಯ ಮೇಲೆ ಮತ್ತು ಅವರ ಸರಾಸರಿ ಉಪಯೋಗದ ಮೇಲೆ ಶೇಕಡಾ 10% ಉಚಿತ ವಿದ್ಯುತ್​​ ಅರ್ಹತೆಗೆ ಅರ್ಹರಾಗಲಿದ್ದಾರೆ.


2 ಕೋಟಿ ಮಂದಿಗೆ ಪ್ರಯೋಜನ

ಕರ್ನಾಟಕ ರಾಜ್ಯದ 2 ಕೋಟಿ ಜನರಿಗೆ ಪ್ರಯೋಜನವಾಗಲಿದೆ. ಬೆಸ್ಕಾಂ ತನ್ನ ಕಚೇರಿಗಳಲ್ಲೂ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಏಕಕಾಲಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ವಲಯಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ.


ವೃತ್ತ ಕಚೇರಿಯಲ್ಲಿ 2, ವಲಯ ಕಚೇರಿಯಲ್ಲಿ 2, ವಿಭಾಗ ಕಚೇರಿಯಲ್ಲಿ 2, ಉಪ ವಿಭಾಗದಲ್ಲಿ 2 ಮತ್ತು ಶಾಖೆಯಲ್ಲಿ 1 ವಿಶೇಷ ಕೌಂಟರ್ ತೆರೆಯಲಾಗಿದೆ. ಪ್ರತಿ ಕೌಂಟರ್‌ಗಳಗೆ ಇಬ್ಬರು ಸಿಬ್ಬಂದಿ ಇರಲಿದ್ದು, 'ಗೃಹಜ್ಯೋತಿ' ಕೌಂಟರ್ ಎಂಬ ಹೆಸರಿನ ಫಲಕ ಅಳವಡಿಕೆ ಮಾಡಲಾಗಿರುತ್ತದೆ.

Previous Post Next Post