ಪಡಿತರ ಚೀಟಿ ಆನ್‌ಲೈನ್‌ ಅರ್ಜಿ ಸಲ್ಲಿಕೆ ಮುಂದಿನ ವಾರದಿಂದ ಆರಂಭ; ಅರ್ಹರು ಎಪಿಎಲ್‌, ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಹಾಕಿಬಿಡಿ

By SVR Creations

 Karnataka Ration Card Application Form:



 ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ತಡೆ ನೀಡಲಾಗಿದ್ದ ರೇಷನ್‌ ಕಾರ್ಡ್‌ ಅರ್ಜಿ ಸಲ್ಲಿಕೆ ವೆಬ್‌ಸೈಟ್‌ಗೆ ಚಾಲನೆ ನೀಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತೀರ್ಮಾನಿಸಿದೆ. ಈ ಹಿಂದೆ ಸರ್ಕಾರ ಸೂಚಿಸಿರುವ ನಿಯಮಗಳಂತೆಯೇ ಅರ್ಜಿ ಪಡೆದು ಕಾರ್ಡ್‌ ನೀಡಲು ಮುಂದಾಗಿದೆ

ಬೆಂಗಳೂರು : 

ಆದ್ಯತಾ ಕುಟುಂಬಗಳ (ಬಡತನ ರೇಖೆಗಿಂತ ಕೆಳಗಿರುವ- ಬಿಪಿಎಲ್‌) ಪಡಿತರ ಚೀಟಿ ಕೋರಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಮುಂದಿನ ವಾರದಿಂದ ಅವಕಾಶ ಕಲ್ಪಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ತೀರ್ಮಾನಿಸಿದೆ

ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆ ಮತ್ತು ಪಡಿತರ ಚೀಟಿಗಳ ವಿತರಣೆ ಸ್ಥಗಿತಗೊಳಿಸಲಾಗಿತ್ತು. ವೆಬ್‌ ಪೋರ್ಟಲ್‌ನಲ್ಲಿಅರ್ಜಿ ಸಲ್ಲಿಕೆ ವಿಭಾಗವನ್ನು ಲಾಕ್‌ ಮಾಡಲಾಗಿತ್ತು. ಈಗ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲು ವೆಬ್‌ ಪೋರ್ಟಲ್‌ ಅನ್ನು ತೆರೆಯಲಾಗುತ್ತಿದೆ

ಚುನಾವಣೆ ಮುಗಿದು ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದರೂ ಈವರೆಗೆ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ. ಸರಕಾರದ ಗ್ಯಾರಂಟಿಗಳ ಲಾಭ ಪಡೆಯಲು ಹಲವರು ಬಿಪಿಎಲ್‌ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸುತ್ತಾರೆಂಬ ಕಾರಣಕ್ಕೆ ಆ ಪ್ರಕ್ರಿಯೆ ಆರಂಭಿಸಿರಲಿಲ್ಲ. ಮುಂದಿನ ವಾರದಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲು ಇಲಾಖೆ ನಿರ್ಧರಿಸಿದೆ.

ಈಗಾಗಲೇ ಪಡಿತರ ಚೀಟಿ ಹೊಂದಿರುವವರು ತಮ್ಮ ಮಕ್ಕಳು ಅಥವಾ ಕುಟುಂಬದ ಇತರೆ ಸದಸ್ಯರ ಹೆಸರುಗಳನ್ನು ಸೇರಿಸಲು, ತಿದ್ದುಪಡಿ ಮಾಡಿಸಲು ಕೂಡ ಆನ್‌ಲೈನ್‌ನಲ್ಲಿ ಕಾಲಾವಕಾಶ ನೀಡಲಾಗುವುದು. ಸದ್ಯ ಈ ಹಿಂದೆ ಅರ್ಜಿ ಸಲ್ಲಿಸಲು ಯಾವ ನಿಯಮಗಳು ಜಾರಿಯಲ್ಲಿದ್ದವೋ ಅದೇ ನಿಯಮಗಳನ್ನು ಅನುಸರಿಸಲಾಗುವುದು. ಒಂದು ವೇಳೆ ಸರಕಾರದಿಂದ ಹೊಸದಾಗಿ ಮಾರ್ಗಸೂಚಿಗಳು ಬಂದರೆ, ಆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಎಪಿಎಲ್‌ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ನಿರ್ಬಂಧಗಳಿಲ್ಲ

2.94 ಲಕ್ಷ ಪಡಿತರ ಚೀಟಿ ವಿತರಣೆ ಬಾಕಿ

ಚುನಾವಣೆ ನೀತಿ ಸಂಹಿತೆಗೂ ಮೊದಲು, ಅಂದರೆ ಇದೇ ವರ್ಷ ಬಿಪಿಎಲ್‌ ಕಾರ್ಡ್‌ಗಾಗಿ 2.94 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳ ಪರಿಶೀಲನೆ ನಡೆಯುತ್ತಿದೆ. ಕಾರು, ಸ್ವಂತ ಮನೆ, ತೆರಿಗೆ ಪಾವತಿದಾರರನ್ನು ಹೊರತುಪಡಿಸಿ, ಅರ್ಹರಿಗೆ ಕಾರ್ಡ್‌ಗಳನ್ನು ನೀಡಲಾಗುವುದು. ರಾಜ್ಯದಲ್ಲಿ ಬಿಪಿಎಲ್‌, ಅಂತ್ಯೋದಯ ಅನ್ನ ಯೋಜನೆ ಸೇರಿ 1.28 ಕೋಟಿ ಪಡಿತರ ಚೀಟಿಗಳನ್ನು ವಿತರಿಸಿದ್ದು, 4.42 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ