ಅನ್ನದಾತರಿಗೆ ‘ರೈತ’ರಾಮಯ್ಯ ಬಂಪರ್ ಗಿಫ್ಟ್; ಯಾವೆಲ್ಲಾ ಯೋಜನೆ ಜಾರಿಗೆ? Raitha Ramaiah's Bumper Gift to Food Donors

By SVR Creations

ಕೃಷಿ ಇಲಾಖೆ ಸಿದ್ದರಾಮಯ್ಯ ಬಂಪರ್ ಗಿಫ್ಟ್:-2025-26ರ ದಾಖಲೆಯ ಬಂಜೆಟ್ (State Budget) ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ರೈತರಿಗೆ (Farmers) ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಕೃಷಿ ಯಾಂತ್ರೀಕರಣ ಕಾರ್ಯಕ್ರಮಕ್ಕೆ ₹428 ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಈ ಯೋಜನೆಯಿಂದ ಸುಮಾರು 50 ಸಾವಿರ ರೈತರಿಗೆ ನೆರವು ಸಿಗಲಿದೆ.

ತೋಟಗಾರಿಕಾ ಪ್ರವಾಸೋದ್ಯಮ ಉತ್ತೇಜನಕ್ಕೆ ಈ ಬಜೆಟ್ನಲ್ಲಿ ಕ್ರಮಕೈಗೊಳ್ಳಲಾಗುವುದು. ತೋಟಗಾರಿಕೆ ಅಭಿವೃದ್ಧಿ ಯೋಜನೆಗೆ ₹95 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿಗಾಗಿ ಜ್ಞಾನಕೋಶ ತೆರಯಲು ನಿರ್ಧರಿಸಲಾಗಿದೆ. ದೇಶಿ ತಳಿಗಳ ಬೀಜಕ್ಕಾಗಿ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು.ಹನಿ, ತುಂತುರು ನೀರಿನ ಘಟಕಕ್ಕೆ ₹440 ಕೋಟಿ ಅನುದಾನ 

ಸಸ್ಯ ಸಂರಕ್ಷಣಾ ಕ್ರಮಗಳಿಗಾಗಿ ₹62 ಕೋಟಿ

ಅಡಿಕೆ ಬೆಳೆ ಎಲೆಚುಕ್ಕೆ ರೋಗ ಬಾಧೆ ತಡೆಗೆ ಕ್ರಮಕೈಗೊಳ್ಳಲಾಗುವುದು ಜೊತೆಗೆ ಸಸ್ಯ ಸಂರಕ್ಷಣಾ ಕ್ರಮಗಳಿಗಾಗಿ ₹62 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.

ರಾಜ್ಯದಲ್ಲಿ 58 ಕೃಷಿ ಪ್ರಯೋಗಾಲಯ ತೆರೆಯಲು ಬಜೆಟ್ ಮಂಡನೆ ಮಾಡಲಾಗಿದೆ. ರೈತರಿಗೆ ಕಡಿಮೆ ದರದಲ್ಲಿ ಕೃಷಿ ಪರಿಕರಗಳನ್ನ ವಿತರಿಸಲಾಗುವುದು. ಜೊತೆಗೆ ಸಮಗ್ರ ಮಳೆಯಾಶ್ರಿತ ಕೃಷಿ ನೀತಿ ಅನುಷ್ಠಾನ ಜಾರಿಗೆ ಮಾಡಲಾಗಿದೆ. ಮಂಡ್ಯ ಕೃಷಿ ವಿವಿ ಮೂಲಸೌಕರ್ಯಕ್ಕೆ ₹25 ಕೋಟಿ ಮತ್ತು ಸಾವಯವ ಸಿರಿಧಾನ್ಯ ಹಬ್‌ಗೆ ₹20 ಕೋಟಿ ಬಿಡುಗಡೆ ಮಾಡಲಾಗಿದೆ.

ಡಿಜಿಟಲ್ ಕೃಷಿ ಸೇವೆಗಳ ಕೇಂದ್ರಗಳ ಸ್ಥಾಪನೆಗೆ ಕ್ರಮ

ಜೊತೆಗೆ ತಂತ್ರಜ್ಞಾನ ಹೆಚ್ಚಾದಂತೆ ರೈತರನ್ನು ಆಧುನೀಕರಣದತ್ತ ಕೊಂಡೊಯ್ಯಲು, ಡಿಜಿಟಲ್ ಕೃಷಿ ಸೇವೆಗಳ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.

ಮುದ್ದೇಬಿಹಾಳದಲ್ಲಿ ಕೃಷಿ ಸಂಶೋಧನಾ ಕೇಂದ್ರ, ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ ಮತ್ತು ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜ್ ಸ್ಥಾಪನೆ ಮಾಡಲು ಘೋಷಣೆ ಮಾಡಲಾಗಿದೆ.

ರೇಷ್ಮೆ ಕೃಷಿಗೆ ಸಿಎಂ ಹೆಚ್ಚಿನ ಮಹತ್ವ

ರೇಷ್ಮೆ ಇಲಾಖೆಗೂ ಸಿಎಂ ಸಿದ್ದರಾಮಯ್ಯ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಗೆ ₹250 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ರಾಮನಗರ, ಶಿಡ್ಲಘಟ್ಟದಲ್ಲಿ 2ನೇ ಹಂತದ ಕಾಮಗಾರಿ, ಮೈಸೂರಿನಲ್ಲಿ ನಬಾರ್ಡ್ ಸಹಯೋಗದಲ್ಲಿ ಮಾರುಕಟ್ಟೆ ಸ್ಥಾಪಿಸಲು ಘೋಷಣೆ ಮಾಡಲಾಗಿದೆ. ಇನ್ನೂ ರೇಷ್ಮೆ ಗೂಡುಗಳಿಗೆ ಸೂಕ್ತ ಬೆಲೆ ಒದಗಿಸಲು ಕ್ರಮ ಕೈಗೊಳ್ಳುವುದು ಜೊತೆಗೆ ರೇಷ್ಮೆ ಅಭಿವೃದ್ಧಿ ಯೋಜನೆಗೆ ₹55 ಕೋಟಿ ಅನುದಾನ ಘೋಷಿಸಲಾಗಿದೆ.

50 ಪಶು ಚಿಕಿತ್ಸಾಲಯ, 100 ಪಶು ವೈದ್ಯಕೀಯ ಸಂಸ್ಥೆಗಳ ನಿರ್ಮಾಣ!

ಜಾನುವಾರುಗಳ ರಕ್ಷಣೆಗೂ ಸಿಎಂ ಸಿದ್ದರಾಮಯ್ಯ ಹೆಚ್ಚಿನ ಮಹತ್ವ ನೀಡಿದ್ದಾರೆ. ಪಶು ಸಂಗೋಪನೆ ಇಲಾಖೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೆಚ್ಚಿನ ಕಾಳಜಿ ವಹಿಸಿದ್ದು, ಜಾನುವಾರುಗಳ ಆಕಸ್ಮಿಕ ಸಾವು ತಡೆಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅನುಗ್ರಹ ಯೋಜನೆ ಪರಿಹಾರ ಮೊತ್ತವನ್ನ 10 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. 50 ಪಶು ಚಿಕಿತ್ಸಾಲಯಗಳ ಸ್ಥಾಪನೆ ಮತ್ತು 100 ಪಶು ವೈದ್ಯಕೀಯ ಸಂಸ್ಥೆಗಳ ಕಟ್ಟಡ ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.