ಇಂದು (ಏ.9) ದ್ವಿತೀಯ ಪಿಯು ಫಲಿತಾಂಶ: ದಕ್ಷಿಣ ಕನ್ನಡ, ಉಡುಪಿಗೆ ಅಗ್ರಸ್ಥಾನ ಉಳಿಕೆ ವಿಶ್ವಾಸ

2 PUC Result-ಕರಾವಳಿ ಜಿಲ್ಲೆಗಳಲ್ಲಿ ಪ್ರಥಮ ಪಿಯುಸಿಯಿಂದಲೇ ಮುತುವರ್ಜಿವಹಿಸಿ, ವಿದ್ಯಾರ್ಥಿಗಳನ್ನು ತಯಾರುಮಾಡುವುದರಿಂದ ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮವಾಗಿ ಬರಲು ಸಾಧ್ಯವಾಗುತ್ತದೆ. ಅಲ್ಲದೆ ದ್ವಿತೀಯ ಪಿಯು ಅಂಕಗಳಲ್ಲಿ ವ್ಯತ್ಯಾಸ ಆದರೂ ವಿದ್ಯಾರ್ಥಿಗಳ ಕುಗ್ಗದೆ, ಎರಡನೇ ಬಾರಿಗೆ ಇರುವ ಅವಕಾಶದಲ್ಲಿ ಅಂಕ ಹೆಚ್ಚು ಗಳಿಸಬಹುದು ಎನ್ನುತ್ತಾರೆ ಮನೋವೈದ್ಯರು.

ಅವಿಭಜಿತ ಕರಾವಳಿಗೆ ಭದ್ರ ಸ್ಥಾನ ಉಳಿಕೆ ಸಾಧ್ಯತೆ

ದಕದಲ್ಲಿ ಕಳೆದ ಬಾರಿ ಮೂರು ವಿಭಾಗಗಳಾದ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಶೇ.93 ದಾಟಿರೋದು ಜಿಲ್ಲೆಯ ಫಲಿತಾಂಶಕ್ಕೆ ದೊಡ್ಡ ಬೂಸ್ಟ್‌ ಕೊಟ್ಟಿತ್ತು

ಪ್ರಥಮ ಪಿಯುಸಿಯ ಸಮಯದಲ್ಲಿಯೇ ವಿದ್ಯಾರ್ಥಿಗಳ ಕುರಿತು ಉಪನ್ಯಾಸಕರು, ಕಾಲೇಜುಗಳು ಹೆಚ್ಚು ಮುತುವರ್ಜಿಯನ್ನು ವಹಿಸುತ್ತಾರೆ. ಇದು ಕೂಡ ಫಲಿತಾಂಶದಲ್ಲಿ ಬದಲಾವಣೆಗೆ ಪೂರಕವಾಗಿದೆ'

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ(ಗ್ಯಾಲರಿ- Agencies)

ಮಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಏ.9ರಂದು ಪ್ರಕಟವಾಗಲಿದೆ. ಕಳೆದ ಕೆಲವು ವರ್ಷಗಳಿಂದ ದ.ಕ. ಹಾಗೂ ಉಡುಪಿ ಪಿಯು ಫಲಿತಾಂಶದಲ್ಲಿ ಫಸ್ಟ್‌, ಸೆಕೆಂಡ್‌ ಸ್ಥಾನವನ್ನು ಉಳಿಸಿಕೊಂಡು ಸಾಗುತ್ತಿದ್ದು, ಈ ಬಾರಿಯೂ ಭದ್ರವಾಗಿ ಉಳಿಯಲಿದೆ ಎನ್ನುವ ಲೆಕ್ಕಾಚಾರ ಇದೆ.

ಮಧ್ಯಾಹ್ನ 3 ಗಂಟೆಗೆ ರಿಸಲ್ಟ್

ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಏಪ್ರಿಲ್‌ 9ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಹೊರಬೀಳಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಫಲಿತಾಂಶ ವೀಕ್ಷಣೆ ಎಲ್ಲಿ-ಹೇಗೆ?

ಅಧಿಕೃತ ವೆಬ್‌ಸೈಟ್‌: https://karresults.nic.in

ಮೊಬೈಲ್‌ ಆ್ಯಪ್‌: ಕರ್ನಾಟಕ ಒನ್‌(Karnataka One)

ನೇರ ಸಂದೇಶ: ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್‌ ಸಂಖ್ಯೆಗೆ ಮಂಡಳಿಯೇ ವಾಟ್ಸ್ಯಾಪ್‌ ಅಥವಾ ಎಸ್‌ಎಂಎಸ್‌ ಮೂಲಕ ಫಲಿತಾಂಶ ಕಳುಹಿಸಲಿದೆ. ಕಾಲೇಜು ನೋಟಿಸ್‌ ಬೋರ್ಡ್‌ : ಗುರುವಾರ ಮಧ್ಯಾಹ್ನ 3ಕ್ಕೆ ಪ್ರಕಟ ಡಿಜಿ ಲಾಕರ್‌ನಲ್ಲಿ ಅಂಕಪಟ್ಟಿ. ಮಂಡಳಿಯು ಈ ಬಾರಿ ಐತಿಹಾಸಿಕ ಹೆಜ್ಜೆ ಇಟ್ಟಿದ್ದು, ವಿದ್ಯಾರ್ಥಿಗಳು ತಮ್ಮ ಅಧಿಕೃತ ಅಂಕಪಟ್ಟಿಯನ್ನು ಡಿಜಿ ಲಾಕರ್‌ ಮೂಲಕ ಪಡೆಯಲು ಅವಕಾಶ ಕಲ್ಪಿಸಿದೆ. ಡೌನ್‌ಲೋಡ್‌ ವಿಧಾನ: http://www.digilocker.gov.in ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಅಂಕಪಟ್ಟಿ ಪಡೆಯಬಹುದು.

ಕಳೆದ ವರ್ಷ ಏ.8, 2025ರಂದು ಫಲಿತಾಂಶ ಬಂದಿತ್ತು. ಈ ಜಿಲ್ಲೆಗಳು ಪ್ರತಿ ವರ್ಷವೂ ಅಗ್ರಸ್ಥಾನ ಪಡೆಯಲು ಇಲ್ಲಿನ ಶೈಕ್ಷಣಿಕ ವಾತಾವರಣ, ಉಪನ್ಯಾಸಕರ ಶ್ರಮ ಸೇರಿದಂತೆ ವಿದ್ಯಾರ್ಥಿ, ಹೆತ್ತವರ ನಿರಂತರ ಕಾಳಜಿಗಳು ವರ್ಕ್ ಔಟ್‌ ಆಗುತ್ತಿದೆ ಎನ್ನುವುದೇ ಈ ಸಕ್ಸಸ್‌ನ ಹಿಂದಿರುವ ಮೂಲ ಮಂತ್ರವಾಗಿದೆ. ಮುಖ್ಯವಾಗಿ ಈ ಬಾರಿ ಮುಖ್ಯ ಪರೀಕ್ಷೆಗಿಂತ ಮೊದಲು ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳು ಸೇರಿದಂತೆ ಅದಕ್ಕೂ ಮೊದಲು ಕೆಎಸ್‌ಇಎಬಿ( ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ) ಅವರು ಬಿಡುಗಡೆ ಮಾಡಿದ್ದ ಮಾದರಿ ಪ್ರಶ್ನೆ ಪತ್ರಿಕೆಗಳು ಕರಾವಳಿ ಸೇರಿದಂತೆ ರಾಜ್ಯದ ಫಲಿತಾಂಶದ ಮೇಲೆ ಉತ್ತಮ ಛಾಪು ಮೂಡುವ ಸಾಧ್ಯತೆ ದಟ್ಟವಾಗಿದೆ.

ಶೇಕಡಾವಾರಿನಲ್ಲಿ ಬದಲಾವಣೆ ಸಾಧ್ಯತೆ:

2025ರಲ್ಲಿ ಉಡುಪಿ (93.90) ಹಾಗೂ ದ.ಕ. ಜಿಲ್ಲೆ ಶೇ.93.57 ಫಲಿತಾಂಶ ಬಂದಿತ್ತು. 2024ರಲ್ಲಿ ದಕದಲ್ಲಿ ಶೇ.97.37 ಫಲಿತಾಂಶ ಬಂದಿತ್ತು. ಅದೇ ರೀತಿಯಲ್ಲಿ ಉಡುಪಿ ಶೇ.96.80 ದಾಖಲಾಗಿತ್ತು. ಆದರೆ ಈ ವರ್ಷಗಳಿಗೆ ಹೋಲಿಸಿದರೆ ಇದೇ ರೀತಿಯಲ್ಲಿ ಶೇಕಡಾವಾರು ಇರಲಿದೆ ಅಥವಾ ಶೇಕಡಾವಾರಿನಲ್ಲಿ ಬದಲಾವಣೆಗಳು ನಡೆಯುವ ಸಾಧ್ಯತೆ ದಟ್ಟವಾಗಿದೆ. ವಿಶೇಷವಾಗಿ ದಕದಲ್ಲಿ ಕಳೆದ ಬಾರಿ ಮೂರು ವಿಭಾಗಗಳಾದ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಶೇ.93 ದಾಟಿರೋದು ಜಿಲ್ಲೆಯ ಫಲಿತಾಂಶಕ್ಕೆ ದೊಡ್ಡ ಬೂಸ್ಟ್‌ ಕೊಟ್ಟಿತ್ತು. ಈ ಬಾರಿಯೂ ಇದೇ ರೀತಿಯ ಮ್ಯಾಜಿಕ್‌ ನಡೆಯುವ ಸಾಧ್ಯತೆ ಹೆಚ್ಚಿನ ಪ್ರಮಾಣದಲ್ಲಿದೆ

ದಕ ಪಿಯುನ ತಂತ್ರಗಾರಿಕೆ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 200ರಷ್ಟು ಪಿಯು ಕಾಲೇಜುಗಳಿವೆ. ಅದರಲ್ಲಿ ಬಹುತೇಕ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ ಇರುವ ಕಾಲೇಜುಗಳು ಹೆಚ್ಚಿದೆ. ಜಿಲ್ಲೆಯಲ್ಲಿ ಬಹಳಷ್ಟು ಕಾಲೇಜುಗಳಲ್ಲಿರುವ ಬಹಳಷ್ಟು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಿಂದ ಬಂದವರಾಗಿದ್ದು, ಇದು ಈ ಬಾರಿಯ ಫಲಿತಾಂಶದಲ್ಲಿ ಮಹತ್ತರ ಬದಲಾವಣೆಗೆ ಮುನ್ನುಡಿಯಾಗಲಿದೆ. ಇದೇ ರೀತಿಯಲ್ಲಿಉಡುಪಿಯಲ್ಲಿ 100 ಪದವಿ ಪೂರ್ವ ಕಾಲೇಜುಗಳಿದ್ದು, ಇಲ್ಲಿಯೂ ಇದೇ ಸ್ಥಿತಿ ಇದೆ. ರಾಜ್ಯದ ಯಾವ ಜಿಲ್ಲೆಯಲ್ಲೂ ಇಂತಹ ಟ್ರೆಂಡ್‌ ಕಾಣ ಸಿಗದು

ದಕ, ಉಡುಪಿಯಲ್ಲಿ ಗಮನಿಸಬೇಕಾದ ವಿಚಾರ ಎಂದರೆ ಪಿಯುಸಿಯ ಫಲಿತಾಂಶದ ವಿಚಾರದಲ್ಲಿ ಫಾಲೋ ಆಫ್‌ಗಳು ಜಾಸ್ತಿಯಾಗಿ ನಡೆಯುತ್ತದೆ. ಪ್ರಥಮ ಪಿಯುಸಿಯ ಸಮಯದಲ್ಲಿಯೇ ವಿದ್ಯಾರ್ಥಿಗಳ ಕುರಿತು ಉಪನ್ಯಾಸಕರು, ಕಾಲೇಜುಗಳು ಹೆಚ್ಚು ಮುತುವರ್ಜಿಯನ್ನು ವಹಿಸುತ್ತಾರೆ. ಇದು ಕೂಡ ಫಲಿತಾಂಶದಲ್ಲಿ ಬದಲಾವಣೆಗೆ ಪೂರಕವಾಗಿದೆ'' ಎಂದಿದ್ದಾರೆ ವಿಠಲ್‌ , ಪ್ರಿನ್ಸಿಪಾಲ್‌ ಕಿಟ್ಟೆಲ್‌ ಪದವಿ ಪೂರ್ವ ಕಾಲೇಜು.

ಪರೀಕ್ಷೆಗಳನ್ನು ಬರೆಯುವಾಗ ಇರುವ ಒತ್ತಡ, ಭಯ ಸಾಮಾನ್ಯವಾಗಿ ಇರುತ್ತದೆ. ಇದು ಇದ್ದಾಗಲೇ ಪರೀಕ್ಷೆಯ ಕುರಿತು ಹೆಚ್ಚಿನ ಕಾಳಜಿಯ ಜತೆಗೆ ನಿರ್ದಿಷ್ಟ ಗುರಿಯೊಂದಿಗೆ ಪರೀಕ್ಷೆ ಬರೆಯಲು ಸಹಕಾರಿ. ಆದರೆ ಇತ್ತ ಕಡೆಯಲ್ಲಿ ಫಲಿತಾಂಶ ಬಂದಾಗಲೂ ಭಿನ್ನ ರೀತಿಯ ಒತ್ತಡ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಕುಗ್ಗುವ ಅಗತ್ಯ ಇರೋದಿಲ್ಲ. ಇಲಾಖೆ ಮತ್ತೊಂದು ಪರೀಕ್ಷೆ ಬರೆಯಲು ಕೂಡ ಅವಕಾಶ ನೀಡಿರುವುದರಿಂದ ಅಂಕಗಳನ್ನು ಸುಧಾರಿಸಲು ಸಾಧ್ಯವಿದೆ'' ಎಂದಿದ್ದಾರೆ ಡಾ.ಕಿರಣ್‌ ಕುಮಾರ್‌ ಪಿ.ಕೆ , ಖ್ಯಾತ ಮನೋವೈದ್ಯ.

ದ್ವಿತೀಯ ಪಿಯುಸಿ ಫಲಿತಾಂಶ ತಡವಾಗಲೂ ಮುಖ್ಯವಾಗಿ ಈ ಬಾರಿ ಡಿಜಿ ಲಾಕರ್‌ನಲ್ಲಿ ಅಂಕಪಟ್ಟಿಯನ್ನು ನೀಡುವ ಕಾರ‍್ಯದಿಂದಾಗಿ ಫಲಿತಾಂಶ ಕೊಂಚ ವಿಳಂಬವಾಯಿತು. ಈ ಬಾರಿ ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜುಗಳಿಗೆ ಏಕಕಾಲದಲ್ಲಿಯೇ ಫಲಿತಾಂಶ ಸಿಗಲಿದೆ. ಮುಂದಿನ ಬಾರಿ ಈ ಪ್ರಕ್ರಿಯೆ ಮತ್ತಷ್ಟು ಸರಳೀಕರಣ ಮಾಡುವ ವ್ಯವಸ್ಥೆ ಮಾಡಲಿದ್ದೇವೆ' ಎಂದಿದ್ದಾರೆ ಪ್ರಕಾಶ್‌ ಜಿ ನಿಟ್ಟಾಲಿ , ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಚೇರ್‌ಮೆನ್‌ .

Previous Post Next Post