ಕರ್ನಾಟಕ ತೋಟಗಾರಿಕೆ ಇಲಾಖೆ 10 ತಿಂಗಳ ಹಾರ್ಟಿಕಲ್ಚರ್ ತರಬೇತಿ ಅರ್ಜಿ ಅವಧಿ ಏಪ್ರಿಲ್ 21 2026 ರವರೆಗೆ ವಿಸ್ತರಣೆ, SSLC ಪಾಸ್ ಯುವಕರಿಗೆ ಅವಕಾಶ.
ಮೈಸೂರು: ನೀವು ರೈತರ (Farmer) ಮಗನೇ? ಓದಿದ್ದು ಸಾಕು ಇನ್ನು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂಬ ಹಂಬಲವಿದೆಯೇ? ಹಾಗಿದ್ದರೆ ನಿಮಗಾಗಿಯೇ ಇಲ್ಲಿದೆ ಒಂದು ಅದ್ಭುತ ಅವಕಾಶ. ಕರ್ನಾಟಕ (Karnataka) ತೋಟಗಾರಿಕೆ ಇಲಾಖೆಯು ಯುವಕರನ್ನು ಕೃಷಿ (Agriculture) ಉದ್ಯಮಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಆಯೋಜಿಸಿರುವ '10 ತಿಂಗಳ ತೋಟಗಾರಿಕೆ ತರಬೇತಿ'ಗೆ (Horticulture Training) ಅರ್ಜಿ ಸಲ್ಲಿಸಲು ಈಗ ಕಾಲ ಮಿಂಚಿಲ್ಲ. ಹೌದು, ಈ ಮೊದಲು ನಿಗದಿಯಾಗಿದ್ದ ಅರ್ಜಿ ಸಲ್ಲಿಕೆಯ ಅವಧಿಯನ್ನು ಈಗ ಏಪ್ರಿಲ್ 21, 2026 ರವರೆಗೆ ವಿಸ್ತರಿಸಲಾಗಿದೆ.
ಏನಿದು ತರಬೇತಿ? ಇಲ್ಲಿ ಏನೆಲ್ಲಾ ಕಲಿಯಬಹುದು?
ಮೈಸೂರಿನ ರಂಗಸಮುದ್ರ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಈ ವಿಶೇಷ ಶಿಬಿರ ನಡೆಯಲಿದ್ದು, ಇಲ್ಲಿ ಕೇವಲ ಪುಸ್ತಕದ ಬದನೆಕಾಯಿಯಲ್ಲ, ಬದಲಾಗಿ ನೆಲದ ಕೃಷಿಯ ಅರಿವು ಮೂಡಿಸಲಾಗುತ್ತದೆ. ಆಧುನಿಕ ನರ್ಸರಿ ಅಭಿವೃದ್ಧಿ, ಲಾಭದಾಯಕ ಹೂಗಾರಿಕೆ, ಹಣ್ಣಿನ ಬೆಳೆಗಳ ನಿರ್ವಹಣೆ, ಸಾವಯವ ಕೃಷಿಯ ಗುಟ್ಟುಗಳು ಮತ್ತು ಇಂದಿನ ಕಾಲಕ್ಕೆ ಅತಿ ಅಗತ್ಯವಿರುವ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?
ವಿದ್ಯಾರ್ಹತೆ: ಕನಿಷ್ಠ SSLC ಪಾಸಾಗಿರಬೇಕು.
ವಯೋಮಿತಿ: ಸಾಮಾನ್ಯ ವರ್ಗಕ್ಕೆ 18-30 ವರ್ಷ, SC/ST ಅಭ್ಯರ್ಥಿಗಳಿಗೆ 18-33 ವರ್ಷ ಹಾಗೂ ಮಾಜಿ ಸೈನಿಕರಿಗೆ ಗರಿಷ್ಠ 65 ವರ್ಷದವರೆಗೆ ಅವಕಾಶವಿದೆ.
ಅರ್ಜಿ ಎಲ್ಲಿ ಸಿಗುತ್ತದೆ?
ಆಸಕ್ತರು ಮೈಸೂರಿನ ಕರ್ಜನ್ ಪಾರ್ಕ್ನಲ್ಲಿರುವ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆಯಬಹುದು. ಇಲ್ಲವೇ ಸುಲಭವಾಗಿ ಮನೆಯಲ್ಲೇ ಕುಳಿತು ಇಲಾಖೆಯ ಅಧಿಕೃತ ವೆಬ್ಸೈಟ್ https://horticulturedir.karnataka.gov.in ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
ಯಾಕೆ ಈ ತರಬೇತಿ ಪಡೆಯಬೇಕು?
ತರಬೇತಿ ಮುಗಿಸಿದ ನಂತರ ಇಲಾಖೆಯಿಂದ ಅಧಿಕೃತ ಪ್ರಮಾಣಪತ್ರ ಸಿಗುವುದಲ್ಲದೆ, ಸ್ವಯಂ ಉದ್ಯೋಗ ಆರಂಭಿಸಲು ಬೇಕಾದ ಎಲ್ಲಾ ಮಾರ್ಗದರ್ಶನ ಸಿಗಲಿದೆ. ಕೃಷಿಯನ್ನು ಬರೀ ಕಾಯಕವನ್ನಾಗಿ ಮಾಡದೆ ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಇದೊಂದು ಲಕ್ಕಿ ಚಾನ್ಸ್.
ಹೆಚ್ಚಿನ ವಿವರಗಳಿಗಾಗಿ ಇಂದೇ ಸಂಪರ್ಕಿಸಿ
0821-2977572. ನೆನಪಿರಲಿ, ಏಪ್ರಿಲ್ 21ರ ನಂತರ ಅವಕಾಶವಿರುವುದಿಲ್ಲ. ತಡಮಾಡಬೇಡಿ, ನಿಮ್ಮ ಭವಿಷ್ಯದ ಬಾಗಿಲು ತೆರೆಯಲು ಇದುವೇ ಸರಿ ಸಮಯ.