ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ

ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಆಟ, ಮೋಜು ಮತ್ತು ಮಸ್ತಿ. ಆದರೆ, ಈ ಬಾರಿಯ ಬೇಸಿಗೆ ರಜೆಯನ್ನು ಇನ್ನಷ್ಟು ಅರ್ಥಪೂರ್ಣವನ್ನಾಗಿಸಲು ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಶೃಂಗೇರಿ ಒಂದು ಅದ್ಭುತವಾದ ವೇದಿಕೆಯನ್ನು ಸಿದ್ಧಪಡಿಸಿದೆ. ಶೃಂಗೇರಿ ಮಠದ ಶೈಕ್ಷಣಿಕ ಉಪಕ್ರಮವಾಗಿರುವ 'ಬಾಲ ಭಾರತಿ' ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷವಾದ 'ಶ್ರೀಮದ್ ರಾಮಾಯಣ ಪರೀಕ್ಷೆ - 2026' ಅನ್ನು ಆಯೋಜಿಸಲಾಗಿದೆ.

ಜಗದ್ಗುರು ಶಂಕರಾಚಾರ್ಯ ಭಾರತಿ ತೀರ್ಥ ಮಹಾಸನ್ನಿಧಾನಂ ಹಾಗೂ ಜಗದ್ಗುರು ಶಂಕರಾಚಾರ್ಯ ವಿಧುಶೇಖರ ಭಾರತಿ ಸನ್ನಿಧಾನಂ ಅವರ ದಿವ್ಯ ಆಶೀರ್ವಾದದೊಂದಿಗೆ ಈ ಬೃಹತ್ ಕಾರ್ಯಕ್ರಮ ಮೂಡಿಬರುತ್ತಿದೆ. ಮಕ್ಕಳಲ್ಲಿ ಸನಾತನ ಧರ್ಮದ ಕಾಲಾತೀತ ಬುದ್ಧಿವಂತಿಕೆಯನ್ನು ಬೆಳೆಸುವ ಹಾಗೂ ಬೇಸಿಗೆಯ ಬಿಡುವಿನಲ್ಲಿ ಶ್ರೀಮದ್ ರಾಮಾಯಣವನ್ನು ಅಧ್ಯಯನ ಮಾಡುವ ಸಂತೋಷವನ್ನು ಆಚರಿಸುವ ಸದುದ್ದೇಶದಿಂದ ಈ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಯ ವಿಭಾಗಗಳು ಮತ್ತು ಅರ್ಹತೆ

ಈ ಪರೀಕ್ಷೆಯನ್ನು ವಿದ್ಯಾರ್ಥಿಗಳ ವಯೋಮಾನಕ್ಕೆ ಅನುಗುಣವಾಗಿ ಎರಡು ಪ್ರಮುಖ ಹಂತಗಳಲ್ಲಿ ನಡೆಸಲಾಗುತ್ತದೆ.

ಹಂತ 1(Level 1): 4ನೇ ತರಗತಿಯಿಂದ 6ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ.

ಹಂತ 2(Level 2): 7ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ.

ಭರ್ಜರಿ ಬಹುಮಾನ

ರಾಮಾಯಣದ ಕುರಿತು ಆಳವಾದ ಜ್ಞಾನ ಬೆಳೆಸಿಕೊಳ್ಳುವ ವಿದ್ಯಾರ್ಥಿಗಳಿಗೆ ಕೇವಲ ಜ್ಞಾನವಷ್ಟೇ ಅಲ್ಲ, ಆಕರ್ಷಕ ನಗದು ಬಹುಮಾನಗಳೂ ಕಾದಿವೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಈ ಕೆಳಗಿನಂತೆ ನಗದು ಪುರಸ್ಕಾರ ನೀಡಲಾಗುತ್ತದೆ:

ಪ್ರಥಮ ಬಹುಮಾನ: ₹50,000

ದ್ವಿತೀಯ ಬಹುಮಾನ: ₹40,000

ತೃತೀಯ ಬಹುಮಾನ: ₹30,000

ವಿಶೇಷ ಬಹುಮಾನ: ₹10,000

ಇದರ ಜೊತೆಗೆ, ಅತಿ ಹೆಚ್ಚು ಅಂಕ ಗಳಿಸುವ ಟಾಪರ್ಸ್‌ಗಳಿಗೆ ಶೃಂಗೇರಿ ಕ್ಷೇತ್ರಕ್ಕೆ ವಿಶೇಷ ಪ್ರಾಯೋಜಿತ ಪ್ರವಾಸದ (Sponsored trip to Sringeri) ಅವಕಾಶ ಕಲ್ಪಿಸಲಾಗುತ್ತದೆ. ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳು, ಪದಕಗಳು, ಪುಸ್ತಕಗಳು ಹಾಗೂ ಆಸಕ್ತಿದಾಯಕ ಪಜಲ್‌ಗಳನ್ನು ಸಹ ಬಹುಮಾನವಾಗಿ ನೀಡಲಾಗುವುದು.

ಪರೀಕ್ಷಾ ದಿನಾಂಕ ಮತ್ತು ವೇಳಾಪಟ್ಟಿ

ಪರೀಕ್ಷೆಯು ಎರಡು ಹಂತಗಳಲ್ಲಿ ಜರುಗಲಿದೆ. ಮೇ 9, 2026 ರಂದು ಶನಿವಾರ ಬೆಳಗ್ಗೆ 10:00 ಗಂಟೆಗೆ ಮೊದಲ ಹಂತದ ಪರೀಕ್ಷೆಗಳು ನಡೆಯಲಿವೆ. ಇದಾದ ಬಳಿಕ, ಕ್ವಾರ್ಟರ್ ಫೈನಲ್ಸ್, ಲೆವೆಲ್ 2 ವಿದ್ಯಾರ್ಥಿಗಳಿಗೆ ಸೆಮಿ-ಫೈನಲ್ಸ್ ಹಾಗೂ ಎರಡೂ ಲೆವೆಲ್‌ನ ವಿದ್ಯಾರ್ಥಿಗಳಿಗೆ ಫೈನಲ್ಸ್ (ಅಂತಿಮ ಸುತ್ತಿನ) ಪರೀಕ್ಷೆಗಳು ಮೇ 23 ಮತ್ತು 24, 2026 ರಂದು ನಡೆಯಲಿವೆ.

ನೋಂದಣಿ ಹೇಗೆ?

ಆಸಕ್ತ ಪೋಷಕರು ಮತ್ತು ವಿದ್ಯಾರ್ಥಿಗಳು ಬಾಲ ಭಾರತಿಯ ಅಧಿಕೃತ ವೆಬ್‌ಸೈಟ್ baalabharati.org ಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಹತ್ತಿರದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ. ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ಮೂಲಕವೂ ನೇರವಾಗಿ ರಿಜಿಸ್ಟರ್ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿ ಹಾಗೂ ನಿರಂತರ ಅಪ್‌ಡೇಟ್‌ಗಳಿಗಾಗಿ ಶೃಂಗೇರಿ ಶಾರದಾ ಪೀಠದ ಅಧಿಕೃತ ವಾಟ್ಸಾಪ್ ಚಾನೆಲ್ (tinyurl.com/SharadaPeethamWA) ಗೆ ಸೇರಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಮ್ಮ ಮಕ್ಕಳ ಬೇಸಿಗೆ ರಜೆಯನ್ನು ಭಾರತೀಯ ಸಂಸ್ಕೃತಿಯ ಪರಿಚಯದೊಂದಿಗೆ ಕಳೆಯಲು ಇದೊಂದು ಅತ್ಯುತ್ತಮ ಅವಕಾಶವಾಗಿದ್ದು, ತಪ್ಪದೇ ಪಾಲ್ಗೊಳ್ಳುವಂತೆ ಬಾಲ ಭಾರತಿ ಸಂಸ್ಥೆ ಕರೆ ನೀಡಿದೆ.


Previous Post Next Post