ಪ್ರಧಾನಿ ಭಾಷಣದ Analysis : 100 ನಿಮಿಷ, ಒಂದೇ ಏಟು - ವಿಪಕ್ಷಗಳ ಟೀಕೆಯೇ ಮೋದಿಗೆ 'ವಿಟಮಿನ್'!

Modi deadly Speech In Rajya Sabha : ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಖರವಾದ ಭಾಷಣವನ್ನು ಮಾಡಿದ್ದಾರೆ. ನಾನು ಮಾತನಾಡಲು ಆರಂಭಿಸಿದರೆ, ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ವಿರೋಧ ಪಕ್ಷಗಳಿಗೆ ಅರಿತಿದೆ. ಹಾಗಾಗಿ, ಸುಸ್ತಾಗಿ ವಾಕ್’ಔಟ್ ಮಾಡಿದ್ದಾರೆ ಎಂದು ಮೋದಿ ಲೇವಡಿ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ಸುಮಾರು, ನೂರು ನಿಮಿಷಗಳ ಕಾಲ ಮೋದಿ, ನಾನ್’ಸ್ಟಾಪ್ ಭಾಷಣ ಮಾಡಿದ್ದಾರೆ.

ವಿರೋಧ ಪಕ್ಷಗಳ ಟೀಕೆಯನ್ನು ಇಟ್ಟುಕೊಂಡು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ.ಮೋದಿ Vs ವಿಪಕ್ಷ : ನಿಮ್ಮ ಟೀಕೆಯೇ ನನಗೆ ವಿಟಮಿನ್ - ವಿಪಕ್ಷಗಳನ್ನು 100 ನಿಮಿಷ ರುಬ್ಬಿದ ಮೋದಿ.ನೂರು ನಿಮಿಷದ ಭಾಷಣದಲ್ಲಿ ಸರ್ಕಾರದ ಸಾಧನೆಯ ಜೊತೆಗೆ, ಕಾಂಗ್ರೆಸ್ ಸರ್ಕಾರದ ಹಗರಣ ಪ್ರಸ್ತಾಪನೆ

ರಾಜ್ಯಸಭೆಯಲ್ಲಿ ಮೋದಿ ಭಾಷಣ

ಹೊಸದಿಲ್ಲಿ : ಸಂಸತ್ತಿನ ಬಜೆಟ್ ಅಧಿವೇಶನದ ನಾಟಕೀಯ ವಿದ್ಯಮಾನದ ಮಧ್ಯೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣವನ್ನು ಮಾಡಿದ್ದಾರೆ. ಸುಮಾರು, ನೂರು ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳ ವಿರುದ್ದ ಅದರಲ್ಲೂ ಪ್ರಮುಖವಾಗಿ, ಕಾಂಗ್ರೆಸ್ ವಿರುದ್ದ ಅಕ್ಷರಸಃ ಕಿಡಿಕಾರಿದ್ದಾರೆ.

2026ರ ಬಜೆಟ್ ಅಧಿವೇಶನದ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾರ್ಪಣೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಪ್ರಧಾನಿ ಮೋದಿ, ರಾಜ್ಯಸಭೆಯಲ್ಲಿ ಮಾತನಾಡಿದ್ದಾರೆ. ಲೋಕಸಭೆಯಲ್ಲಿ ಪ್ರಧಾನಿ ಮೋದಿ, ಬುಧವಾರ (ಫೆ. 4) ಭಾಷಣವನ್ನು ಮಾಡಬೇಕಿತ್ತು. ಆದರೆ, ವಿಪಕ್ಷಗಳ ಗದ್ದಲದಿಂದ ಇದು ಸಾಧ್ಯವಾಗಿರಲಿಲ್ಲ. ಆದರೆ, ಲೋಕಸಭೆಯಲ್ಲಿನ ವಿದ್ಯಮಾನಕ್ಕೆ ಭಾರೀ ತಿರುವನ್ನು ಸ್ಪೀಕರ್ ಓಂ ಬಿರ್ಲಾ ನೀಡಿದ್ದಾರೆ.

ಗುರುವಾರ ಮಧ್ಯಾಹ್ನದ ನಂತರ ರಾಜ್ಯಸಭೆಗೆ ಆಗಮಿಸಿದ ಪ್ರಧಾನಿ ಮೋದಿ, ಸುಮಾರು 96ನಿಮಿಷಗಳ ಕಾಲ ಭಾಷಣವನ್ನು ಮಾಡಿದರು. ವಿರೋಧ ಪಕ್ಷಗಳ ವಾಕ್’ಔಟ್ ನಡುವೆ, ಭಾಷಣವನ್ನು ಮುಂದುವರಿಸಿದ ಮೋದಿ, ಪಾಪ ಪ್ರತಿಭಟನೆ ನಡೆಸಿ.. ನಡೆಸಿ.. ಸುಸ್ತಾಗಿರಬೇಕು ಎಂದು ಲೇವಡಿಯನ್ನು ಮಾಡಿದರು. ನಾನು ಮಾತನಾಡಲು ಆರಂಭಿಸಿದರೆ, ನನ್ನನ್ನು ನಿಯಂತ್ರಿಸುವುದು ಕಷ್ಟ ಎನ್ನುವುದು ಅವರಿಗೂ ಗೊತ್ತಿದೆ ಎನ್ನುವ ಮೂಲಕ, ಭಾಷಣವನ್ನು ಮುಕ್ತಾಯಗೊಳಿಸಿದರು. ಮೋದಿ ಭಾಷಣದ Key Takeaways, ಮುಂದೆ ವಿವರಿಸಲಾಗಿದೆ..

ಲೋಕಸಭೆಯಲ್ಲಿ ಸ್ಪೋಟಕ ಹೇಳಿಕೆ ನೀಡಿದ ಸ್ಪೀಕರ್ ಓಂ ಬಿರ್ಲಾ

ಚೀನಾ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ, ನರವಣಿ ಆತ್ಮಕಥನದ ಚರ್ಚೆಯು, ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಲೋಕಸಭೆಯಲ್ಲಿ ಪ್ರಧಾನಿ ಮೋದಿಯವರ ಆಸನಕ್ಕೆ ಮುತ್ತಿಗೆ ಹಾಕಲು ವಿಪಕ್ಷಗಳ ಮಹಿಳಾ ಸದಸ್ಯರು ಪ್ರಯತ್ನಿಸಿದ್ದು ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಮೋದಿ ಭಾಷಣವನ್ನು ಮುಂದೂಡಲಾಗಿತ್ತು. ವಿಪಕ್ಷಗಳ ಪ್ರತಿಭಟನೆಯ ನಡುವೆ, ಸ್ಪೀಕರ್ ಹಲವು ಬಾರಿ ಅಧಿವೇಶನವನ್ನು ಮುಂದೂಡಿದ್ದರು.

ಆದರೆ, ಪ್ರಧಾನಿಯವರು ಲೋಕಸಭೆಯಲ್ಲಿ ಹಾಜರು ಇರವುದು ಬೇಡ ಎಂದು ನಾನೇ ಸೂಚಿಸಿದ್ದೆ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದ್ದದ್ದು ಹೊಸ ಟ್ವಿಸ್ಟ್’ಗೆ ಕಾರಣವಾಯಿತು. ಮೋದಿಯವರ ಆಸನದ ಬಳಿ, ಕಾಂಗ್ರೆಸ್ ಪಾರ್ಟಿಯ ಸದಸ್ಯರು ಅಹಿತಕರ ಘಟನೆ ನಡೆಸಲು ಯೋಜನೆ ರೂಪಿಸಿವೆ ಎನ್ನುವ ಮಾಹಿತಿ ನಮಗೆ ಲಭ್ಯವಾಗಿದೆ. ಒಂದು ವೇಳೆ, ಅದು ನಡೆದಿದ್ದೇ ಆದಲ್ಲಿ, ಪ್ರಜಾಪ್ರಭುತ್ವದ ವ್ಯವಸ್ಥೆಗೇ ಕಪ್ಪುಚುಕ್ಕೆಯಾಗುತ್ತಿತ್ತು. ನಾನೇ ಅವರಿಗೆ ಲೋಕಸಭೆಗೆ ಬರದಂತೆ ವಿನಂತಿಸಿಕೊಂಡೆ ಎಂದು ಸ್ಪೀಕರ್ ಹೇಳಿರುವುದು, ದೇಶದ ರಾಜಕೀಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.

ಕಾಂಗ್ರೆಸ್, ಸ್ಪೀಕರ್ ಹೇಳಿಕೆಯನ್ನು ಅಲ್ಲಗಳೆದಿದ್ದರೂ, ಅಧಿಕೃತವಾಗಿ ಲೋಕಸಭೆಯ ಸ್ಪೀಕರ್ ಪೀಠದಿಂದ ಈ ಹೇಳಿಕೆ ಬಂದಿದೆ. ಇದಕ್ಕೂ ಮೊದಲು, ದೇಶದ್ರೋಹಿ, ಪಕ್ಷದ್ರೋಹಿ ಎನ್ನುವ ಹೇಳಿಕೆಯನ್ನು ವಿಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ ಸಂಸದರೊಬ್ಬರಿಗೆ ಹೇಳಿದ್ದು ಕೂಡಾ ಸಾಕಷ್ಟು ವೈರಲ್ ಆಗಿದೆ. ಅದಕ್ಕೆ ಈಗ, ಸಿಖ್ ಸಮುದಾಯದ ಲೇಪನ ಅಂಟಿಕೊಂಡಿದೆ.

ವಿಪಕ್ಷಗಳ ಟೀಕೆಯೇ ನನ್ನ ಆರೋಗ್ಯದ ಗುಟ್ಟು

ನನಗೆ ಟೀಕೆಗಳು ಹೊಸದೇನಲ್ಲ, ಕಳೆದ 25ವರ್ಷಗಳಿಂದ ನನ್ನ ವಿರುದ್ದ ವಿಪಕ್ಷಗಳು ಟೀಕಿಸುತ್ತಲೇ ಬರುತ್ತಿದೆ. ’ಮೋದಿ ತೇರಿ ಕಬ್ರ್ ಖುದೇಗಿ’ ಎಂದು ಕೂಗುವವರು ನಡುವೆ ನಾನು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ವಿಪಕ್ಷಗಳ ಈ ಟೀಕೆಗಳೇ ನನಗೆ ವಿಟಮಿನ್ ಎಂದು ಪ್ರಧಾನಿ ಮೋದಿ, ರಾಜ್ಯಸಭೆಯಲ್ಲಿ ಭಾಷಣ ಮಾಡುತ್ತಾ ಹೇಳಿದ್ದಾರೆ. ದಿನವೊಂದಕ್ಕೆ ಕೆಜಿಗಟ್ಟಲೆ ಟೀಕೆಯನ್ನು ನಾನು ಎದುರಿಸುತ್ತೇನೆ ಎಂದು ಮೋದಿ, ಹಲವು ಸಾರ್ವಜನಿಕ ಸಭೆಯಲ್ಲೂ ಹೇಳಿದ್ದುಂಟು. ಆ ಮೂಲಕ, ವಿಪಕ್ಷಗಳ ಟೀಕೆಗೆ ಜಗ್ಗುವವನು ನಾನಲ್ಲ ಎನ್ನುವ ಸಂದೇಶವನ್ನು ಮೋದಿ ರವಾನಿಸಿದ್ದಾರೆ.

ನಮ್ಮ ದೇಶದ ಖಜಾನೆಯನ್ನು ದೇಶದ ರಕ್ಷಣೆಗಾಗಿ ಮತ್ತು ದೇಶವನ್ನು ಕಾಯುತ್ತಿರುವ ಸೈನಿಕರಿಗಾಗಿ ಸರ್ಕಾರ ಮೀಸಲಿಟ್ಟಿದೆ ಎಂದು ಮೋದಿ ಹೇಳಿದ್ದಾರೆ. ಕೇಂದ್ರದ ಬಜೆಟ್’ನಲ್ಲಿ ಸಿಂಹಪಾಲು, ರಕ್ಷಣಾ ಇಲಾಖೆಗೆ ಹೋಗುತ್ತದೆ. ಆ ಮೂಲಕ, ದೇಶದ ಸುರಕ್ಷತೆಯ ದೃಷ್ಟಿಯಲ್ಲಿ ಯಾವುದೇ ರಾಜಿಯಿಲ್ಲ ಎನ್ನುವ ಮೆಸೇಜ್’ಅನ್ನು ಮೋದಿ ಕೊಟ್ಟಿದ್ದಾರೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ನಡುವೆ, ಹಳಸಿದ ಸಂಬಂಧದ ನಡುವೆ ಮೋದಿ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ.

ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತಂದ ವಿಚಾರವನ್ನೂ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ್ದಾರೆ. ಹಿಂದಿನ ಸರ್ಕಾರಗಳು ಯಾವ ರೀತಿ ಈ ವಿಚಾರದಲ್ಲಿ ಕಾಂಪ್ರಮೈಸ್ ಮಾಡಿಕೊಂಡಿತ್ತು ಎನ್ನುವುದನ್ನು ರಾಜ್ಯಸಭೆಯ ಮುಂದಿಟ್ಟರು. ಆಪರೇಷನ್ ಸಿಂಧೂರ್ ವಿಚಾರವನ್ನು ಮತ್ತೆ ಪ್ರಧಾನಿಗಳು ಪ್ರಸ್ತಾವಿಸಿದರು.

ವಿಶ್ವದ ಬಲಿಷ್ಠ ಆರ್ಥಿಕತೆಯತ್ತ ನಮ್ಮ ದೇಶ ಭಾರತ

ಕೆಲವರು ನಮ್ಮ ದೇಶದ ಆರ್ಥಿಕತೆಯನ್ನು ಸತ್ತು ಹೋಗಿದೆ ಎಂದು ಹೇಳಿದ್ದರು, ಅದನ್ನು ನಮ್ಮಲ್ಲಿ ಕೆಲವರು ಸಮರ್ಥಿಸಿಕೊಂಡು ಗೇಲಿ ಮಾಡಿದ್ದರು. ನಾವು, ವಿಶ್ವದ ಮೂರನೇ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರದತ್ತ ಸಾಗುತ್ತಿದ್ದೇವೆ. ಇದನ್ನು ಕೆಲವರು ಕಣ್ಣುಬಿಟ್ಟು ನೋಡಲಿ ಎಂದು ಮೋದಿ ಹೇಳಿದರು. ಆ ಮೂಲಕ, ವಿಪಕ್ಷದ ನಾಯಕ ರಾಹುಲ್ ಗಾಂಧಿ ಹೆಸರನ್ನು ಉಲ್ಲೇಖಿಸಿದೇ ಮಾತಿನಲ್ಲೇ ತಿವಿದರು.

ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿರುವ ಹಿನ್ನಲೆಯಲ್ಲಿ ಭಾರತ - ಐರೋಪ್ಯ ಒಕ್ಕೂಟದ ನಡುವೆ ಒಪ್ಪಂದವಾಗಿದೆ. ಅಮೆರಿಕಾ ತನ್ನ ಸುಂಕವನ್ನು ಪರಿಷ್ಕರಿಸಿದೆ. ಇದೆಲ್ಲಾ ಏನಕ್ಕಾಗಿದೆ? ನಾವು ಬಲಿಷ್ಠ ದೇಶ ಎನ್ನುವ ಕಾರಣಕ್ಕಾಗಿ ಅಲ್ಲವೇ ಎಂದು ಪ್ರಧಾನಿ ಹೇಳಿದರು. ಆ ಮೂಲಕ, ವಿಪಕ್ಷಗಳಿಗೆ ಚಾಟಿಯನ್ನು ಬೀಸಿದರು.

ದೇಶದ ಜನಸಂಖ್ಯೆಯೇ ಕಾಂಗ್ರೆಸ್ಸಿಗಿರುವ ತೊಂದರೆ ಎಂದ ಪ್ರಧಾನಿ

ಹಿಂದೆ ನೆಹರೂ ಅವರಿಗೆ ಪ್ರಶ್ನೆಯೊಂದನ್ನು ಕೇಳಲಾಗಿತ್ತು, ನಿಮ್ಮ ದೇಶದ ಸಮಸ್ಯೆ ಏನು ಎಂದು. ಅದಕ್ಕೆ ನೆಹರೂ, 350 ಮಿಲಿಯನ್ ಅಂದರು. ಇದಾದ ನಂತರ, ಇಂದಿರಾ ಗಾಂಧಿಯವರು ಇರಾನ್ ದೇಶಕ್ಕೆ ಹೋದಾಗ, ಅವರು 570 ಮಿಲಿಯನ್ ಸಮಸ್ಯೆ ಎಂದಿದ್ದರು. ಅವರು ಹೇಳುತ್ತಿದ್ದದ್ದು ದೇಶದ ಜನರನ್ನು. ಕಾಂಗ್ರೆಸ್ಸಿಗೆ ಭಾರತೀಯರು ಎಂದರೆ ಸಮಸ್ಯೆ. ನಮಗೆ 140 ಕೋಟಿ ಜನರು ನಮ್ಮ ಆಸ್ತಿ. ಅವರನ್ನು ಕಾಪಾಡುವುದು ನಮ್ಮ ಕರ್ತವ್ಯ ಎನ್ನುವುದು ನಮ್ಮ ಕಾರ್ಯಶೈಲಿ ಎಂದು ಮೋದಿ ಹೇಳಿದರು. ತಮ್ಮ ಭಾಷಣದುದ್ದಕ್ಕೂ ಮೋದಿ, ಕಾಂಗ್ರೆಸ್, ಅದರಲ್ಲೂ ಪ್ರಮುಖವಾಗಿ ನೆಹರೂ, ಗಾಂಧಿ ಕುಟುಂಬವನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ.

ಆರ್ಟಿಕಲ್ 370 ರದ್ದತಿ, ನಕ್ಸಲ್ ನಿಗ್ರಹ, ಈಶಾನ್ಯ ಭಾರತದ ಅಭಿವೃದ್ದಿಯ ಬಗ್ಗೆಯೂ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ವಿಪಕ್ಷಗಳು ಸಂಸತ್ತಿನಲ್ಲಿ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆಯೂ ಮೋದಿ ವಿಷಾದ ವ್ಯಕ್ತ ಪಡಿಸಿದರು. ಆ ಮೂಲಕ, ಏನು ಕಾಂಗ್ರೆಸ್ ನೇತೃತ್ವದಲ್ಲಿ ಗದ್ದಲಗಳು ನಡೆಯುತ್ತಿದ್ದವೋ, ಅದಕ್ಕೆ ತಮ್ಮ ಭಾಷಣದ ಮೂಲಕ ತಿರುಗೇಟು ನೀಡಿದರು ಎಂದು ವಿಶ್ಲೇಷಿಸಲಾಗುತ್ತಿದೆ.


Previous Post Next Post