ಪಂಚವೃತ್ತಿ ಯೋಜನೆ: ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ 1 ಲಕ್ಷ ರೂ. ಆರ್ಥಿಕ ನೆರವು; ಶೇ.20ರಷ್ಟು ಸಬ್ಸಿಡಿ; ಅರ್ಜಿ ಸಲ್ಲಿಕೆ ಹೇಗೆ?

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳ ಆರ್ಥಿಕ ಮತ್ತು ವೃತ್ತಿ ಅಭಿವೃದ್ಧಿಗಾಗಿ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅದೇ "ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ನೆರವು" ಯೋಜನೆ. ಈ ಯೋಜನೆ ಪಂಚವೃತ್ತಿ ಯೋಜನೆ ಎಂದೇ ಜನಜನಿತವಾಗಿದೆ. ಈ ಯೋಜನೆಯನ್ನು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕುಶಲಕರ್ಮಿಗಳು ತಮ್ಮ ವೃತ್ತಿಯನ್ನು ಆಧುನೀಕರಿಸಲು, ಹೊಸ ಉಪಕರಣಗಳನ್ನು ಖರೀದಿಸಲು ಮತ್ತು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಈ ಯೋಜನೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಪಂಚವೃತ್ತಿ ಯೋಜನೆ? ಯೋಜನಯಡಿ ದೊರೆಯುವ ಆರ್ಥಿಕ ನೆರವು ಎಷ್ಟು? ಅರ್ಜಿ ಸಲ್ಲಿಕೆ ಹೇಗೆ ಎಂಬುದನ್ನು ತಿಳಿಯೋಣ.

ಏನಿದು ಪಂಚವೃತ್ತಿ ಯೋಜನೆ ?

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಜಾರಿಗೊಳಿಸಿರುವ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ನೆರವು ಅಥವಾ ಪಂಚವೃತ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯನ್ನು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ವಿಶ್ವಕರ್ಮ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳಿಗಾಗಿ ರೂಪಿಸಲಾಗಿರುವ ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಒಟ್ಟು 1,00,000 ನೆರವು ನೀಡಲಾಗುತ್ತದೆ. ಇದರಲ್ಲಿ 80,000 ರೂ. ಸಾಲವನ್ನು ವಾರ್ಷಿಕ 4% ಬಡ್ಡಿದರದಲ್ಲಿ ನೀಡಿದರೆ ಉಳಿದ 20,000 ರೂ. ಮೊತ್ತವು ಮರುಪಾವತಿ ರಹಿತ ಸಹಾಯಧನವಾಗಿರುತ್ತದೆ. ಈ ಸಾಲವನ್ನು 3 ವರ್ಷಗಳ ಅವಧಿಯಲ್ಲಿ (34 ಮಾಸಿಕ ಕಂತುಗಳಲ್ಲಿ), 2 ತಿಂಗಳ ಗ್ರೇಸ್ ಅವಧಿಯೊಂದಿಗೆ ಮರುಪಾವತಿ ಮಾಡಬೇಕಿರುತ್ತದೆ, ಹಾಗೂ ಅರ್ಜಿಯನ್ನು ನಿಗಮದ ಕಚೇರಿ ಅಥವಾ ವೆಬ್‌ಸೈಟ್ ಮೂಲಕ ಆಫ್‌ಲೈನ್ ವಿಧಾನದಲ್ಲಿ ಸಲ್ಲಿಸಬಹುದು.

ಪಂಚವೃತ್ತಿ ಯೋಜನೆ

ಪಂಚವೃತ್ತಿ ಯೋಜನೆಯ ಪ್ರಮುಖ ಅಂಶಗಳು

ಕಡಿಮೆ ಬಡ್ಡಿದರ: ಕೇವಲ ವಾರ್ಷಿಕ 4% ಬಡ್ಡಿದರದಲ್ಲಿ 80,000 ರೂ. ಸಾಲ ಲಭ್ಯ.

ಸಹಾಯಧನ: 20,000 ರೂ. ಸರ್ಕಾರದಿಂದ ಮರುಪಾವತಿ ರಹಿತ ಸಹಾಯಧನ ಲಭ್ಯವಾಗಲಿದೆ.

ಆಧುನೀಕರಣಕ್ಕೆ ಅವಕಾಶ: ಕುಶಲಕರ್ಮಿಗಳು ಒಟ್ಟು 1 ಲಕ್ಷ ರೂ.ದ ನೆರವಿನಿಂದ ಆಧುನಿಕ ಉಪಕರಣಗಳನ್ನು ಖರೀದಿಸಬಹುದು ಅಥವಾ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಬಹುದು.

ಸುಲಭ ಮರುಪಾವತಿ: 2 ತಿಂಗಳ ಗ್ರೇಸ್ ಅವಧಿಯೊಂದಿಗೆ 3 ವರ್ಷಗಳ ಮರುಪಾವತಿ ಅವಧಿ ಇರಲಿದೆ.

ಆರ್ಥಿಕ ಸಬಲೀಕರಣ: ಸಾಂಪ್ರದಾಯಿಕ ವೃತ್ತಿಗಳನ್ನು ಉಳಿಸಿಕೊಂಡು, ನಿರಂತರ ಆದಾಯ ಗಳಿಕೆಗೆ ಅನುಕೂಲ.

ಫಲಾನುಭವಿಗಳ ಆಯ್ಕೆ ಹೇಗೆ?

ಈ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಹತಾ ಮಾನದಂಡಗಳು

ಯೋಜನೆಯ ಲಾಭ ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

ಅರ್ಜಿದಾರರು ವಿಶ್ವಕರ್ಮ ಸಮುದಾಯಕ್ಕೆ ಸೇರಿರಬೇಕು.

ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ವಯೋಮಿತಿ 18 ರಿಂದ 55 ವರ್ಷಗಳ ಒಳಗಿರಬೇಕು.

ಈ ಕೆಳಗಿನ ಸಾಂಪ್ರದಾಯಿಕ ವೃತ್ತಿಗಳಾದ ಚಿನ್ನ ಮತ್ತು ಬೆಳ್ಳಿ ಕೆಲಸ, ಶಿಲ್ಪಕಲೆ, ಕಮ್ಮಾರಿಕೆ, ಮರಗೆಲಸ ಮತ್ತು ಕರಕುಶಲ ವೃತ್ತಿಯಲ್ಲಿ ತೊಡಗಿರಬೇಕು.

ಈ ಹಿಂದೆ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಯಾವುದೇ ಸಾಲವನ್ನು ಪಡೆದಿರಬಾರದು.

ಅರ್ಜಿದಾರರಕುಟುಂಬದ ವಾರ್ಷಿಕ ವರಮಾನಗ್ರಾಮಾಂತರ ಪ್ರದೇಶದವರಿಗೆ ರೂ.40,000 ರೂ.ಗಳು ಪಟ್ಟಣ ಪ್ರದೇಶದವರಿಗೆ 55,000 ರೂ.ಗಳ ಒಳಗಿರಬೇಕು.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಆದಾಯ ಪ್ರಮಾಣಪತ್ರವು ನಿಗದಿತ ಮಿತಿಯಲ್ಲಿರಬೇಕು.

ಅರ್ಜಿ ಸಲ್ಲಿಸುವ ವಿಧಾನ – ಆಫ್‌ಲೈನ್ ಪ್ರಕ್ರಿಯೆ

ಪಂಚವೃತ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಫ್‌ಲೈನ್ ಮೂಲಕ ನಡೆಯುತ್ತದೆ:

ಹಂತ 1: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಭೇಟಿ ನೀಡಿ. ಅಥವಾ ಅಧಿಕೃತ KVCDC ವೆಬ್‌ಸೈಟ್‌ https://kvcdcl.karnataka.gov.in/ ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಹಂತ 2: ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಬೇಕು.

ಹಂತ 3: ಭರ್ತಿ ಮಾಡಿದ ಅರ್ಜಿ ಮತ್ತು ದಾಖಲೆಗಳನ್ನು ನಿಮ್ಮ ಜಿಲ್ಲೆಯಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಸಲ್ಲಿಸಿ.

ಹಂತ 4: ಅರ್ಜಿ ಸಲ್ಲಿಸಿದ ನಂತರ ದಿನಾಂಕ, ಸಮಯ ಮತ್ತು ಅನನ್ಯ ಉಲ್ಲೇಖ ಸಂಖ್ಯೆ (ಲಭ್ಯವಿದ್ದರೆ) ಇರುವ ಸ್ವೀಕೃತಿ ರಸೀದಿ ಪಡೆಯಲು ಮರೆಯಬೇಡಿ.

ಅಗತ್ಯ ದಾಖಲೆಗಳು

ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

ಆಧಾರ್ ಕಾರ್ಡ್

ಪಡಿತರ ಚೀಟಿ

ಆದಾಯ ಪ್ರಮಾಣಪತ್ರ (ತಹಶೀಲ್ದಾರ್ ಅವರಿಂದ ಪಡೆದದ್ದು)

ಜಾತಿ ಪ್ರಮಾಣಪತ್ರ

ಆಧಾರ್‌ಗೆ ಲಿಂಕ್ ಆದ ರಾಷ್ಟ್ರೀಕೃತ ಅಥವಾ ಗ್ರಾಮೀಣ ಬ್ಯಾಂಕಿನ ಉಳಿತಾಯ ಖಾತೆಯ ಪಾಸ್‌ಬುಕ್ ಪ್ರತಿ


Previous Post Next Post