ಎಂಜಿನರೇಗಾ ಯೋಜನೆಯಡಿ ಹಸು, ಎಮ್ಮೆ ಶೆಡ್‌ ನಿರ್ಮಾಣಕ್ಕೆ ಸಿಗಲಿದೆ 57000 ರೂ. ಸಹಾಯಧನ! ಅರ್ಜಿ ಸಲ್ಲಿಕೆ ಹೇಗೆ?

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ನಂತರ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಜಾನುವಾರು ಸಾಕಾಣಿಕೆ ಪ್ರಮುಖ ಜೀವನಾಧಾರವಾಗಿದೆ. ರೈತರ ಆದಾಯ ಹೆಚ್ಚಿಸಲು, ಸುರಕ್ಷಿತ ಹಾಗೂ ಸ್ವಚ್ಛ ಪರಿಸರದಲ್ಲಿ ಜಾನುವಾರುಗಳ ಆರೋಗ್ಯಕರ ಬೆಳವಣಿಗೆಗೆ ನೆರವಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸಬ್ಸಿಡಿ ಮತ್ತು ಸಹಾಯಧನ ಯೋಜನೆಗಳನ್ನು ಜಾರಿಗೆ ತಂದಿವೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾನುವಾರುಗಳ ಶೆಡ್‌ಗಳ ನಿರ್ಮಾಣಕ್ಕೆ 57 ಸಾವಿರ ರೂ.ಗಳ ಸಾಯಧನವನ್ನು ಪಡೆಯಬಹುದಾಗಿದೆ. ಜೊತೆಗೆ ವೈಯಕ್ತಿಕ ಕಾಮಗಾರಿಗೆ ಸರ್ಕಾರದಿಂದ ಸಹಾಯಧನ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಶೆಡ್‌ಗಳ ನಿರ್ಮಾಣಕ್ಕೆ ಸಹಾಯಧನ ಪಡೆಯುವುದು ಹೇಗೆ ಎಂಬುದನ್ನು ತಿಳಿಯೋಣ.

ಏನಿದು ಶೆಡ್‌ ನಿರ್ಮಾಣ ಸಹಾಯಧನ ಯೋಜನೆ?

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮುಖ್ಯ ಉದ್ದೇಶವು ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ವಯಸ್ಕ ಸದಸ್ಯರಿಗೆ, ಅವರು ಕೌಶಲ್ಯರಹಿತ ದೈಹಿಕ ಕೆಲಸ ಮಾಡಲು ಸ್ವಯಂಸೇವಕರಾಗಿ ಮುಂದೆ ಬಂದಲ್ಲಿ, ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಯ ವೇತನದ ಉದ್ಯೋಗವನ್ನು ಒದಗಿಸುವುದಾಗಿದೆ. ಈ ಯೋಜನೆಯಡಿ ಒಟ್ಟು 266 ರೀತಿಯ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಅವುಗಳಲ್ಲಿ ಶಾಲೆ ಕಾಂಪೌಂಡ್, ಆಟದ ಮೈದಾನ, ಶೌಚಾಲಯ, ಅಡುಗೆ ಕೋಣೆ, ಮಳೆ ನೀರು ಕೊಯ್ಲು, ಅರಣ್ಯೀಕರಣ, ಪೌಷ್ಟಿಕ ಕೈತೋಟ, ಕೆರೆ ಅಭಿವೃದ್ಧಿ, ರಾಜಕಾಲುವೆ, ಚರಂಡಿ, ಸಮುದಾಯ ಭವನ, ಗೋದಾಮು, ಸ್ವಚ್ಛ ಸಂಕೀರ್ಣ ಘಟಕ, ಬೂದು ನೀರು ನಿರ್ವಹಣೆ, ಸ್ಮಶಾನ ಅಭಿವೃದ್ಧಿ ಮುಂತಾದವುಗಳು ಸೇರಿವೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯು ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಲು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಮೂಲಕ ಆರ್ಥಿಕ ನೆರವು ನೀಡುತ್ತದೆ. ಇದರಲ್ಲಿ ದನ, ಕುರಿ, ಮೇಕೆ, ಮತ್ತು ಕೋಳಿ ಸಾಕಣೆಗಾಗಿ ವೈಯಕ್ತಿಕ ಶೆಡ್‌ ನಿರ್ಮಾಣಕ್ಕೆ ಸಹಾಯಧನವೂ ಲಭ್ಯವಿದೆ.

ಸಹಾಯಧನದ ಮೊತ್ತ ಎಷ್ಟು?

ಹಸು ಮತ್ತು ಎಮ್ಮೆ ಕೊಟ್ಟಿಗೆ ನಿರ್ಮಾಣಕ್ಕೆ ಎಲ್ಲಾ ವರ್ಗದ ರೈತರಿಗೂ 57,000 ರೂ. ಸಹಾಯಧನ ನೀಡಲಾಗುತ್ತದೆ.

ಈ ಮೊತ್ತದಲ್ಲಿ ಸುಮಾರು 10,556 ರೂ. ಕೂಲಿಯಾಗಿ ಮತ್ತು ಉಳಿದ 46,644 ರೂ. ಸಾಮಗ್ರಿ ಸಹಾಯಧನವಾಗಿ ಸಿಗುತ್ತದೆ. ಕುರಿ, ಕೋಳಿ, ಹಂದಿ ಶೆಡ್‌ ನಿರ್ಮಾಣಕ್ಕೂ ಸಹಾಯಧನ ಲಭ್ಯವಿದೆ.

ಒಂದು ಕುಟುಂಬವು ಜೀವಿತಾವಧಿಯಲ್ಲಿ ನರೇಗಾ ವೈಯಕ್ತಿಕ ಕಾಮಗಾರಿಗಳ ಅಡಿಯಲ್ಲಿ ಗರಿಷ್ಠ 5 ಲಕ್ಷ ರೂ.ವರೆಗೆ ಸಹಾಯಧನ ಪಡೆಯಬಹುದಾಗಿದೆ. ಕೃಷಿ ಹೊಂಡ, ತೋಟಗಾರಿಕೆ ಬೆಳೆ, ಕ್ಷೇತ್ರ ಬದು ಇತ್ಯಾದಿ ವೈಯಕ್ತಿಕ ಕಾಮಗಾರಿಗಳಿಗೂ ನೆರವು ಸಿಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ನರೇಗಾ ಯೋಜನೆಯ ಲಾಭ ಪಡೆಯಲು ಮೊದಲು ಜಾಬ್ ಕಾರ್ಡ್ ಹೊಂದಿರಬೇಕು. ಇಲ್ಲದಿದ್ದರೆ, ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ನೀವು ಜಾನುವಾರುಗಳನ್ನು ಸಾಕುತ್ತಿದ್ದೀರಿ ಮತ್ತು ಶೆಡ್ ಅಗತ್ಯವಿದೆ ಎಂಬುದನ್ನು ದೃಢೀಕರಿಸಲು ಸ್ಥಳೀಯ ಪಶು ಚಿಕಿತ್ಸಾಲಯಕ್ಕೆ ಭೇಟಿ ನೀಡಿ, ದೃಢೀಕರಣ ಪತ್ರ ಪಡೆಯಬೇಕು. ಎಲ್ಲಾ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಪರಿಶೀಲನೆ ನಂತರ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಆರಂಭಕ್ಕೆ ಅನುಮತಿ ಸಿಗುತ್ತದೆ.

ಎಂಜಿ ನರೇಗಾ ಯೋಜನೆಯಡಿ ಸಬ್ಸಿಡಿ

ಎಂಜಿ ನರೇಗಾ ಯೋಜನೆಯಡಿ ಸಹಾಯಧನದ ವಿವರ

ಅಗತ್ಯವಿರುವ ದಾಖಲೆಗಳು:

ಜಾಬ್ ಕಾರ್ಡ್ ಪ್ರತಿ

ಆಧಾರ್ ಕಾರ್ಡ್

ಭೂಮಿಯ ದಾಖಲಾತಿ (ಪಹಣಿ)

ಬ್ಯಾಂಕ್ ಖಾತೆಯ ವಿವರಗಳು

ಪಶು ವೈದ್ಯಾಧಿಕಾರಿಗಳ ದೃಢೀಕರಣ ಪತ್ರ

ಕುರಿ ಮತ್ತು ಮೇಕೆ ಸಾಕಾಣಿಕೆಗಾಗಿ ಇತರೆ ಯೋಜನೆಗಳು

ಹೈನುಗಾರಿಕೆಯ ಜೊತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಉತ್ತೇಜನ ನೀಡಲು ಕರ್ನಾಟಕ ಸರ್ಕಾರವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ:

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿಯಲ್ಲಿ, ರಾಜ್ಯದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ 10 ಸಾವಿರ ಆರ್ಥಿಕವಾಗಿ ಹಿಂದುಳಿದ ಕುರಿಗಾಹಿ ಸದಸ್ಯರಿಗೆ 20+1 ಕುರಿ/ಮೇಕೆ ಘಟಕಗಳನ್ನು ಒದಗಿಸಲಾಗುತ್ತಿದೆ. ಯೋಜನೆಯಡಿ ಘಟಕದ ಒಟ್ಟು ವೆಚ್ಚ 1,75,000 ರೂ. ಆಗಿದೆ.

ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (NCDC) ಮತ್ತು ಭಾರತ ಸರ್ಕಾರದ ಸಹಕಾರ ಇಲಾಖೆಯಿಂದ ಶೇ. 50% ಸಾಲ ನೀಡಲಾಗುತ್ತದೆ. ರಾಜ್ಯ ಸರ್ಕಾರದಿಂದ ಶೇ. 25% ಸಹಾಯಧನ (ಸಬ್ಸಿಡಿ) ಲಭ್ಯವಾಗಲಿದ್ದು, ಫಲಾನುಭವಿ ಸದಸ್ಯರಿಂದ ಶೇ. 25% ವಂತಿಕೆ ಸಂಗ್ರಹಿಸಲಾಗುತ್ತದೆ.

ವಿಶೇಷ ಘಟಕ ಯೋಜನೆ / ಗಿರಿಜನ ಉಪಯೋಜನೆ

ಈ ಯೋಜನೆಯಡಿ ಕರ್ನಾಟಕ ಕುರಿ ಮತ್ತು ಕುರಿ ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ/ಮೇಕೆ ಘಟಕ ವಿತರಣೆ ಮಾಡಲಾಗುತ್ತದೆ. ಯೋಜನೆ ಪ್ರಯೋಜನ ಪಡೆಯಲು ಫಲಾನುಭವಿಗಳು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)ದವರಾಗಿರಬೇಕು. 6+1 ಕುರಿ/ಮೇಕೆ ಘಟಕ ವಿತರಣೆ ಮಾಡಲಾಗುವುದು. ಘಟಕದ ಮೊತ್ತ 45,000 ರೂ.ಗಳಾಗಿವೆ. ಇದರಲ್ಲಿ 90% ಸಹಾಯಧನ ನೀಡಲಾಗುತ್ತದೆ. ಅಂದರೆ 40,500 ರೂ. ಘಟಕದ ವೆಚ್ಚದಲ್ಲಿ ಫಲಾನುಭವಿ ವಂತಿಕೆ / ಬ್ಯಾಂಕ್‌ ಸಾಲದ ಮತ್ತ ಕೇವಲ 4,500 ರೂ.ಗಳಾಗಿವೆ. ಉಳಿದ ಮೊತ್ತವನ್ನು ಸರ್ಕಾರವೇ ಪಾವತಿ ಮಾಡಲಿದೆ.


Previous Post Next Post