ಸಾಂಬಾರ ಪದಾರ್ಥಗಳ ರಾಣಿ ಎಂದೇ ಕರೆಯಲಾಗುವ ಏಲಕ್ಕಿ, ಸಿಹಿ ತಿನಿಸುಗಳಿಗೆ ಪರಿಮಳ ಹೆಚ್ಚಿಸಿದರೆ ಮಸಾಲೆಯುಕ್ತ ಭಕ್ಷ್ಯಗಳಿಗೆ ರುಚಿ ಹೆಚ್ಚಿಸುತ್ತದೆ. ಭಾರತೀಯ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದು. ಇದರ ನಿಯಮಿತ ಸೇವನೆಯಿಂದ ಆರೋಗ್ಯಕ್ಕೂ ಬಹುಪಯೋಗಿಯಾಗಿದೆ. ಅದಲ್ಲದೇ, ಕರ್ನಾಟಕದ ಈ ಜಿಲ್ಲೆಯನ್ನು ಏಲಕ್ಕಿ ನಾಡು ಎಂದು ಕರೆಯಲಾಗುತ್ತದೆ. ಹಾಗಾದ್ರೆ ಕರ್ನಾಟಕದಲ್ಲಿರುವ ಈ ಜಿಲ್ಲೆಯ ಹೆಸರು ಯಾವುದು, ಈ ಹೆಸರು ಬರಲು ಕಾರಣವೇನು? ಎನ್ನುವ ಮಾಹಿತಿ ಇಲ್ಲಿದೆ.
Land of Cardamom: ಕರ್ನಾಟಕದ ಈ ಜಿಲ್ಲೆಗೆ ಏಲಕ್ಕಿ ನಾಡು ಎಂದು ಹೆಸರು ಬಂದದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಸಂಗತಿ
ಕರ್ನಾಟಕವು ಶ್ರೀಮಂತ ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕ ಸ್ಥಳಗಳಿಂದಲೇ ಪ್ರಸಿದ್ಧಿ ಪಡೆದಿದೆ. ಈ ಕನ್ನಡ ನಾಡು ಪ್ರಸಿದ್ಧ ದೇವಾಲಯಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ವೈವಿಧ್ಯಮಯ ಸಂಪ್ರದಾಯಗಳ ತವರೂರು. ಈ ಕರ್ನಾಟಕದ ರಾಜ್ಯದಲ್ಲಿ ಏಲಕ್ಕಿ ನಾಡಿದೆ. ಮಧ್ಯ ಕರ್ನಾಟಕದಲ್ಲಿರುವ ಹಾವೇರಿಯನ್ನು “ಏಲಕ್ಕಿ ನಾಡು” ಎಂದು ಕರೆಯುತ್ತಾರೆ.
ಈ ಏಲಕ್ಕಿ ಸುಗಂಧ ಉತ್ಪನ್ನಗಳು, ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಭಾರೀ ಬೇಡಿಕೆಯಿರುವ ಏಲಕ್ಕಿ ಬೆಳೆಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇತ್ತ ಹಾವೇರಿ ಜಿಲ್ಲೆಯು ಏಲಕ್ಕಿ ಮಾಲೆಗೆ ಹೆಸರುವಾಸಿಯಾಗಿದೆ. ಏಲಕ್ಕಿಯನ್ನು ವಿಶೇಷವಾಗಿ ಹೂಮಾಲೆಯನ್ನು ತಯಾರಿಸಲು ಬಳಸಲಾಗುತ್ತಿದೆ. ಹಾವೇರಿ ಜಿಲ್ಲೆಯ ಏಲಕ್ಕಿ ಮಾಲೆಗೆ ದೇಶದಿಂದ ಮಾತ್ರವಲ್ಲದೇ ವಿದೇಶದಿಂದಲೂ ಭಾರಿ ಬೇಡಿಕೆಯಿದೆ. ಈ ಏಲಕ್ಕಿ ವ್ಯಾಪಾರವು ಮಹತ್ವದ್ದಾಗಿದ್ದು, ಇಲ್ಲಿನ ವ್ಯಾಪಾರಿಗಳು ಮಲೆನಾಡು ಭಾಗದ ಏಲಕ್ಕಿಯನ್ನು ಸಂಸ್ಕರಿಸಿ ಮಾರಾಟ ಮಾಡುತ್ತಾರೆ. ಇಲ್ಲಿನ ಬಹುತೇಕ ಜನರು ಏಲಕ್ಕಿ ಮಾಲೆಯನ್ನೇ ವ್ಯಾಪಾರಕ್ಕಾಗಿ ಅವಲಂಬಿಸಿದ್ದಾರೆ. ಆದರಿಂದ ಮಧ್ಯ ಕರ್ನಾಟಕದಲ್ಲಿರುವ ಹಾವೇರಿ ಜಿಲ್ಲೆಗೆ “ಏಲಕ್ಕಿ ನಾಡು” ಎಂದು ಹೆಸರು ಬಂದಿದೆ.
ಈ ಹಾವೇರಿಯ ಸಾಂಪ್ರದಾಯಿಕ ಏಲಕ್ಕಿ ಮಾಲೆಗಳು ರಾಷ್ಟ್ರಪತಿ, ಪ್ರಧಾನಿ, ಭಾರತೀಯ ಗಣ್ಯರು ಸೇರಿದಂತೆ ವಿದೇಶಿ ಗಣ್ಯರ ಕೊರಳನ್ನು ಏರಿರುವುದು ವಿಶೇಷ. ತಾಜಾ ಏಲಕ್ಕಿ ಕಾಳುಗಳು, ಕರಕುಶಲ ರೇಷ್ಮೆ ದಾರಗಳು, ಮಣಿಗಳನ್ನು ಬಳಸಿ ಏಲಕ್ಕಿ ಮಾಲೆಯನ್ನು ತಯಾರಿಸಲಾಗುತ್ತದೆ. ಈ ಏಲಕ್ಕಿ ಹಾರಗಳು ಭಾರತದಲ್ಲಿ ಮಾತ್ರವಲ್ಲದೇ ಜಪಾನ್, ಯುಕೆ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ವಿದೇಶದಲ್ಲಿಯು ಬೇಡಿಕೆಯನ್ನು ಹೊಂದಿದೆ. ಹಾವೇರಿಯಲ್ಲಿ ಏಲಕ್ಕಿಯಷ್ಟೇ ಅಲ್ಲದೇ, ಪ್ರಮುಖ ಬೆಳೆಯಾದ ಮೆಣಸಿನಕಾಯಿ ಸೇರಿದಂತೆ ಇತರೆ ಸಾಂಬಾರ ಪದಾರ್ಥಗಳನ್ನು ಇಲ್ಲಿನ ರೈತರು ಬೆಳೆಯುತ್ತಾರೆ.