ಕರ್ನಾಟಕ ರಾಜ್ಯ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಪ್ರತಿವರ್ಷ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. 2025-26ನೇ ಸಾಲಿನಲ್ಲಿ ಕೃಷಿ ಇಲಾಖೆಯು ರೈತರಿಗೆ ಹಲವಾರು ಪ್ರಮುಖ ಯೋಜನೆಗಳನ್ನು ಪ್ರಕಟಿಸಿದ್ದು, ಅದರಲ್ಲಿ ಕೃಷಿ ಭಾಗ್ಯ ಯೋಜನೆಯು ಪ್ರಮುಖವಾಗಿದೆ. ಈ ಯೋಜನೆಯಡಿ ಕೃಷಿ ಹೊಂಡ, ತಂತಿ ಬೇಲಿ, ಟಾರ್ಪಲ್ ಹೊದಿಕೆ, ಡೀಸೆಲ್ ಇಂಜಿನ್, ಮತ್ತು ತುಂತುರು ನೀರಾವರಿ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಸಹಾಯಧನ ಲಭ್ಯವಾಗಲಿದೆ. ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏನಿದು ಕೃಷಿ ಭಾಗ್ಯ ಯೋಜನೆ? ಇದರಿಂದ ರೈತರಿಗೆ ದೊರೆಯುವ ಸಹಾಯಧನ ಎಷ್ಟು ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಏನಿದು ಕೃಷಿ ಭಾಗ್ಯ ಯೋಜನೆ?
ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುವ ರೈತರಿಗೆ ಆರ್ಥಿಕ ಸ್ಥಿರತೆ ತರುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿನ ಕೊರತೆ ನೀಗಿಸಲು, ಮಳೆ ನೀರನ್ನು ಸಂಗ್ರಹಿಸಿ ಮರುಬಳಕೆ ಮಾಡಲು ಈ ಯೋಜನೆ ಸಹಾಯ ಮಾಡುತ್ತದೆ. ರೈತರು ಈ ಯೋಜನೆಯಡಿ ಈ ಆರು ಪ್ರಮುಖ ಘಟಕಗಳಿಗೆ ಸಹಾಯಧನ ಪಡೆಯಬಹುದು:
ಕೃಷಿ ಹೊಂಡ: ಮಳೆ ನೀರು ಸಂಗ್ರಹಣೆಗೆ ಸಹಾಯ ಲಭ್ಯವಾಗಲಿದೆ.
ತಂತಿ ಬೇಲಿ: ಬೆಳೆಗಳನ್ನು ಪ್ರಾಣಿಗಳಿಂದ ರಕ್ಷಿಸಲು ತಂತಿ ಬೇಲಿ ನಿರ್ಮಿಸಲು ನೆರವು ದೊರೆಯಲಿದೆ
ಟಾರ್ಪಲ್ ಹೊದಿಕೆ: ಕೃಷಿ ಹೊಂಡದಲ್ಲಿ ಸಂಗ್ರಹಿಸಿದ ನೀರು ಆವಿಯಾಗದಂತೆ ತಡೆಯಲು ಟಾರ್ಪಲ್ಗಳನ್ನು ಒದಗಿಸಲಾಗುತ್ತದೆ.
ಕ್ಷೇತ್ರ ಬದು: ಮಣ್ಣಿನ ಸವೆತ ತಡೆಗಟ್ಟಲು ಮತ್ತು ನೀರು ಇಂಗಿಸಲು ಬದುಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುತ್ತಿದೆ.
ಡೀಸೆಲ್ ಇಂಜಿನ್: ಕೃಷಿ ಕಾರ್ಯಗಳಿಗೆ ನೆರವು ಡೀಸೆಲ್ ಸಬ್ಸಿಡಿ ಕೂಡ ಲಭ್ಯವಾಗಲಿದೆ.
ತುಂತುರು ನೀರಾವರಿ: ನೀರಿನ ಸಮರ್ಥ ಬಳಕೆಗೆ ತುಂತುರು ನೀರಾವರಿ ಪದ್ದತಿ ಅಳವಡಿಕೆಗೆ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ.
ಕೃಷಿ ಹೊಂಡ ನಿರ್ಮಾಣಕ್ಕೆ ಶೇ.90ರಷ್ಟು ಸಬ್ಸಿಡಿ
ಯೋಜನೆಯಡಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಲು ಸಾಮಾನ್ಯ ವರ್ಗಕ್ಕೆ ಸೇರಿದ ರೈತರಿಗೆ ಶೇ 80% ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಫಲಾನುಭವಿಗಳಿಗೆ ಶೇ 90% ರಷ್ಟು ಸಹಾಯಧನ ನೀಡಲಾಗುತ್ತದೆ.
ತುಂತುರು ಮತ್ತು ಹನಿ ನೀರಾವರಿಗೆ ಸಹಾಯಧನ
ಸೂಕ್ಷ್ಮ ನೀರಾವರಿ ಯೋಜನೆಯಡಿ, ತುಂತುರು ಮತ್ತು ಹನಿ ನೀರಾವರಿ ಘಟಕಗಳನ್ನು ಅಳವಡಿಸಲು ಸರ್ಕಾರವು ರೈತರಿಗೆ ಶೇ. 90ರಷ್ಟು ಸಹಾಯಧನ ನೀಡುತ್ತದೆ. ಇವುಗಳ ಸೌಲಭ್ಯವನ್ನು ಪಡೆಯಲು ರೈತರು ಶಾಶ್ವತ ನೀರಾವರಿ ಮೂಲ ಅಥವಾ ಕೊಳವೆ ಬಾವಿ ಹೊಂದಿರಬೇಕು.
ಲಾಭಗಳು:
ನೀರಿನ ಸಮರ್ಪಕ ಬಳಕೆ.
ಬೆಳೆ ಇಳುವರಿ ಶೇ. 30-40ರಷ್ಟು ಹೆಚ್ಚಳ.
ಕಾರ್ಮಿಕ ಮತ್ತು ಖರ್ಚು ಕಡಿಮೆಯಾಗುತ್ತದೆ.
ದೇಸಿ ತಳಿಗಳ ಸಂರಕ್ಷಣೆ
ಜಿಲ್ಲೆಯಲ್ಲಿರುವ ದೇಸಿ ತಳಿಗಳ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ರೈತರ ಹೆಸರಿನಲ್ಲಿ ತಳಿಗಳನ್ನು ಸಂಗ್ರಹಿಸಿ, ಭವಿಷ್ಯದಲ್ಲಿ ಅವುಗಳಿಗೆ ಪೇಟೆಂಟ್ ಪಡೆಯಲು ಸಹ ಸಹಾಯ ನೀಡಲಾಗುವುದು. ಈಗಾಗಲೇ 12 ದೇಸಿ ತಳಿಗಳನ್ನು ಸಂಗ್ರಹಿಸಲಾಗಿದೆ. ನಿಮ್ಮ ಬಳಿ ಯಾವುದೇ ದೇಸಿ ತಳಿಗಳ ಮಾಹಿತಿ ಇದ್ದರೆ, ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಅರ್ಹತಾ ಮಾನದಂಡಳೇನು?
ಕೃಷಿ ಭಾಗ್ಯ ಯೋಜನೆಗೆ ಅರ್ಹತಾ ಮಾನದಂಡಗಳು ಇಲ್ಲಿವೆ:
ಭೂಮಿ: ರೈತರು 1 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿರಬೇಕು.
ಹಣಕಾಸು ನೆರವು: ಕಳೆದ ಮೂರು ವರ್ಷಗಳಲ್ಲಿ ಪಂಪ್ ಸೆಟ್ ಮತ್ತು ಹನಿ ನೀರಾವರಿ ಸಬ್ಸಿಡಿ ಪಡೆದ ರೈತರು ಈ ಯೋಜನೆ ಅಡಿಯಲ್ಲಿ ಆ ಘಟಕಗಳಿಗೆ ಮತ್ತೆ ಸಹಾಯಧನ ಪಡೆಯಲು ಅರ್ಹರಲ್ಲ. ಆದರೆ, ಅವರು ಕೃಷಿ ಹೊಂಡ ನಿರ್ಮಾಣಕ್ಕೆ ಹಣಕಾಸಿನ ನೆರವು ಪಡೆಯಬಹುದು.
ರೈತ ಗುರುತಿನ ಸಂಖ್ಯೆ : ಯೋಜನೆಯ ಲಾಭ ಪಡೆಯಲು ರೈತರು ಕಡ್ಡಾಯವಾಗಿ ರೈತ ಗುರುತಿನ ಸಂಖ್ಯೆ (FID) ಹೊಂದಿರಬೇಕು.
ಬ್ಯಾಂಕ್ ಖಾತೆ: ಫಲಾನುಭವಿಗಳು ತಮ್ಮ ಹೆಸರಿನಲ್ಲಿಯೇ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಈ ಖಾತೆಯು ಸಹಾಯಧನ ಪಡೆಯಲು ಅಗತ್ಯವಾಗಿರುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಪ್ರಸ್ತುತ, ಈ ಯೋಜನೆಯು ಕೆಲವು ಆಯ್ದ ಜಿಲ್ಲೆಗಳಲ್ಲಿ ಜಾರಿಯಲ್ಲಿದೆ. ಅರ್ಹ ರೈತರು ನೇರವಾಗಿ ತಮ್ಮ ಹೋಬಳಿ ವ್ಯಾಪ್ತಿಯಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಪ್ರಕ್ರಿಯೆಯ ಹಂತಗಳು:
ಅರ್ಜಿ ಸಲ್ಲಿಕೆ: ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು.
ಕ್ಷೇತ್ರ ಪರಿಶೀಲನೆ: ನಿಮ್ಮ ಅರ್ಜಿಯ ಪರಿಶೀಲನೆಯ ನಂತರ, ಕೃಷಿ ಅಧಿಕಾರಿಗಳು ನಿಮ್ಮ ಹೊಲಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತಾರೆ.
ಕಾರ್ಯಾದೇಶ : ಪರಿಶೀಲನೆ ನಂತರ, ಅರ್ಹ ರೈತರಿಗೆ ಒಂದು ವಾರದೊಳಗೆ K-KISAN ತಂತ್ರಾಂಶದ ಮೂಲಕ ಕಾರ್ಯಾದೇಶ ಮತ್ತು ಅಂದಾಜು ಪಟ್ಟಿಯನ್ನು ನೀಡಲಾಗುತ್ತದೆ.
ಯೋಜನೆಯ ಅನುಷ್ಠಾನ: ಈ ಆದೇಶದ ಪ್ರಕಾರ, ರೈತರು ಕೃಷಿ ಹೊಂಡ, ತಂತಿ ಬೇಲಿ, ಸೂಕ್ಷ್ಮ ನೀರಾವರಿ ಇತ್ಯಾದಿ ಘಟಕಗಳನ್ನು ಅಳವಡಿಸಲು ಪ್ರಾರಂಭಿಸಬಹುದು. ಈ ಪ್ರಗತಿಯನ್ನು GPS ಫೋಟೋಗಳ ಮೂಲಕ ದಾಖಲಿಸಲಾಗುತ್ತದೆ.
ಆರ್ಥಿಕ ನೆರವು ಬಿಡುಗಡೆ: ಎಲ್ಲಾ ಘಟಕಗಳ ಅನುಷ್ಠಾನ ಪೂರ್ಣಗೊಂಡ ನಂತರ, ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಅಧಿಕಾರಿಗಳ ಅಂತಿಮ ಪರಿಶೀಲನೆಯ ನಂತರ, ಯೋಜನಾ ವೆಚ್ಚವನ್ನು ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.
ಅಗತ್ಯವಿರುವ ದಾಖಲೆಗಳೇನು?
ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ
ಜಾತಿ ಪ್ರಮಾಣಪತ್ರ
ಗುರುತಿನ ಚೀಟಿ
ಆದಾಯ ಪ್ರಮಾಣಪತ್ರ
ಕೃಷಿ ಪಾಸ್ಬುಕ್/ಪಹಣಿ ಪತ್ರ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ, ನೀವು ರೈತ ಕರೆ ಕೇಂದ್ರದ ಸಹಾಯವಾಣಿ ಸಂಖ್ಯೆ 1800-425-3553 ಗೆ ಕರೆ ಮಾಡಬಹುದು.
