ಸ್ವಾವಲಂಬಿ ಸಾರಥಿ ಯೋಜನೆ: ವಾಣಿಜ್ಯ ವಾಹನ ಖರೀದಿಗೆ ಸಿಗಲಿದೆ 75% ಸಹಾಯಧನ! ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ?

ಸ್ವಾವಲಂಬಿ ಸಾರಥಿ ಯೋಜನೆ: ವಾಣಿಜ್ಯ ವಾಹನ ಖರೀದಿಗೆ ಸಿಗಲಿದೆ 75% ಸಹಾಯಧನ! ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ?

ಹಿಂದುಳಿದ ಸಮುದಾಯದ ನಿರುದ್ಯೋಗಿ ಯುವಕರಿಗೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೊಳಿಸಿದೆ. 2023-24ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ ವಿವಿಧ ಸಮುದಾಯದ ನಿರುದ್ಯೋಗಿ ಯುವಕ/ಯುವತಿಯರಿಗೆ ವಾಣಿಜ್ಯ ಉದ್ದೇಶಕ್ಕಾಗಿ ವಾಹನಗಳನ್ನು ಖರಿಸಲು ಹಾಗೂ ಹೊಸ ಉದ್ಯಮವನ್ನು ಸ್ಥಾಪಿಸಲು ಸಬ್ಸಿಡಿ ದರದಲ್ಲಿ ಗರಿಷ್ಠ 4 ಲಕ್ಷ ರೂ. ವರೆಗೂ ಸಾಲ ಸೌಲಭ್ಯ ದೊರೆಯಲಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಇತರ ಹಿಂದುಳಿದ ಸಮುದಾಯದ ಅಭಿವೃದ್ಧಿ ನಿಗಮ ಮೂಲಕ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ.



ಏನಿದು ಕರ್ನಾಟಕ ಸ್ವಾವಲಂಬಿ ಸಾರಥಿ ಯೋಜನೆ?

ಹಿಂದುಳಿದ ಸಮುದಾಯದ ಯುವಕರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೊಳಿಸಿದೆ. ನಿರುದ್ಯೋಗಿ ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯುವಕರು ಈ ಯೋಜನೆ ಅಡಿಯಲ್ಲಿ ನಾಲ್ಕು ಚಕ್ರಗಳ ವಾಹನ ಖರೀದಿಯಿಂದ ಹಿಡಿದು ಹೊಸ ಉದ್ಯಮವನ್ನು ಪ್ರಾರಂಭಿಸುವವರೆಗೆ 50% ರಿಂದ 75% ವರೆಗೆ ಸಹಾಯಧನವನ್ನು ಪಡೆಯುತ್ತಾರೆ. ಕರ್ನಾಟಕ ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ, ಪ್ರಯಾಣಿಕ ಆಟೋ ರಿಕ್ಷಾ / ಸರಕು ವಾಹನ / ಟ್ಯಾಕ್ಸಿ ಖರೀದಿಗಾಗಿ ಬ್ಯಾಂಕುಗಳಿಂದ ಸಾಲಗಳಿಗೆ ವಾಹನದ ಮೌಲ್ಯದ 50% ಅಥವಾ ಗರಿಷ್ಠ ರೂ. 3.00 ಲಕ್ಷ ಸಬ್ಸಿಡಿ ನೀಡಲಾಗುತ್ತದೆ.

ಸ್ವಾವಲಂಬಿ ಸಾರಥಿ ಯೋಜನೆಯ ಮಾರ್ಗಸೂಚಿಗಳು

  • ಈ ಯೋಜನೆಯನ್ನು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC)ವು ರಾಷ್ಟ್ರೀಕೃತ / ಪರಿಶಿಷ್ಟ ಬ್ಯಾಂಕುಗಳ ಸಹಯೋಗದೊಂದಿಗೆ ಜಾರಿಗೊಳಿಸುತ್ತದೆ.
  • ಪ್ರಯಾಣಿಕ ಆಟೋರಿಕ್ಷಾಗಳು / ಸರಕು ವಾಹನಗಳು / ಟ್ಯಾಕ್ಸಿ ಖರೀದಿಗಾಗಿ ಬ್ಯಾಂಕುಗಳಿಂದ ಸಾಲಗಳಿಗೆ ಅನುಮೋದನೆ ಪಡೆದ ಫಲಾನುಭವಿಗಳಿಗೆ ವಾಹನದ ಮೌಲ್ಯದ 50% ಅಥವಾ ಗರಿಷ್ಠ 3.00 ಲಕ್ಷ ರೂ. ಸಬ್ಸಿಡಿ ನೀಡಲಾಗುತ್ತದೆ.
  • ಈ ಯೋಜನೆಯಡಿ ಸೌಲಭ್ಯ ಪಡೆಯಲು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.
  • ಈ ಯೋಜನೆಯಡಿಯಲ್ಲಿ ಖರೀದಿಸಿದ ವಾಹನವನ್ನು ಸಾಲದ ಅವಧಿಯಲ್ಲಿ ಇತರರಿಗೆ ಮಾರಾಟ ಮಾಡಬಾರದು.
  • ಫಲಾನುಭವಿಯು ರಸ್ತೆ ತೆರಿಗೆ ಮತ್ತು ವಿಮೆಯ ಬಗ್ಗೆ ಮಾಹಿತಿಯನ್ನು ಪೂರಕ ದಾಖಲೆಗಳೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು.
  • ಯಾವುದೇ ವಿಮಾ ಪಾವತಿಯನ್ನು ಕ್ಲೈಮ್ ಮಾಡಿದರೆ, ವಿಮಾ ಪಾವತಿ ವಿವರಗಳನ್ನು ನಿಗಮಕ್ಕೆ ಹಂಚಿಕೊಳ್ಳಬೇಕು.
  • ಫಲಾನುಭವಿಯು ವಾಹನದ ವೆಚ್ಚದ 10% ಅನ್ನು ಕೊಡುಗೆ ನೀಡಬೇಕು.
  • KMDC ಮೂಲಕ ಸಬ್ಸಿಡಿ ಪಡೆದ ವಾಹನವನ್ನು ವಾಹನದ ಮೇಲೆ “KMDC ನಿಂದ ಸಬ್ಸಿಡಿ” ಎಂದು ಪ್ರದರ್ಶಿಸಬೇಕು.
  • ನಗರ ಪ್ರದೇಶಗಳಲ್ಲಿ ಪ್ರಯಾಣಿಕರ ಆಟೋ ರಿಕ್ಷಾಗಳಿಗೆ ಪರ್ಮಿಟ್ ಕಡ್ಡಾಯವಾಗಿದೆ.

ಫಲಾನುಭವಿಗಳಿಗೆ ಅರ್ಹತಾ ಮಾನದಂಡಗಳು

  • ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಅಭ್ಯರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ 3ಬಿ ಸಮುದಾಯಗಳಿಗೆ ಸೇರಿದವರಾಗಿರಬೇಕು.
  • ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಇಚ್ಚಿಸುವ ಅರ್ಜಿದಾರರು ಲಘು ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕು
  • ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಿಗೆ ರೂ.98000/-ಗಳು ನಗರ ಪ್ರದೇಶದವರಿಗೆ ರೂ. 120000/-ಗಳನ್ನು ಮೀರಿರಬಾರದು.
  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರ ವಯಸ್ಸು ಕನಿಷ್ಠ 21 ವರ್ಷಗಳು ಹಾಗೂ ಗರಿಷ್ಠ 45 ವರ್ಷಗಳ ಮಿತಿಯೊಳಗಿರಬೇಕು.
  • ಈ ಹಿಂದೆ ನಿಗಮದ ಯೋಜನೆಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಈ ಉದ್ದೇಶಕ್ಕೆ ಯಾವುದೇ ಯೋಜನೆಗಳಿಂದ ಸೌಲಭ್ಯ ಪಡೆದಿರಬಾರದು.
  • ಈ ಯೋಜನೆಯಲ್ಲಿ ಸವಲತ್ತು ಪಡೆಯಬಯಸುವ ಅರ್ಜಿದಾರರು ವಾಸಿಸುತ್ತಿರುವ ವ್ಯಾಪ್ತಿಗೆ ಬರುವ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಯಲ್ಲಿ ಸರ್ಕಾರದ ಸೌಲಭ್ಯ ಪಡೆಯುವ ಆಧಾರ್‌ ಸಂಯೋಜಿತ ಬ್ಯಾಂಕ್‌ ಖಾತೆ ಹೊಂದಿರಬೇಕು.
  • ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಸೌಲಭ್ಯ ಪಡೆಯತಕ್ಕದ್ದು.
  • ಈ ಯೋಜನೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದು.
  • ಈ ಯೋಜನೆಯಲ್ಲಿ ಮಂಗಳಮುಖಿಯರಿಗೂ ಸಹ ಆದ್ಯತೆ ನೀಡುವುದು.
  • ಈ ಯೋಜನೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಯು ಸ್ವಯಂ ಟ್ಯಾಕ್ಸಿ ಚಾಲನೆ (Yellow Board) ಉದ್ದೇಶಕ್ಕೆ ವಾಹನವನ್ನು ನೋಂದಾಯಿಸತಕ್ಕದ್ದು.

ಸ್ವಾವಲಂಬಿ ಸಾರಥಿ ಯೋಜನೆಯ ಸಬ್ಸಿಡಿ ವಿವರ

ಪರಿಶಿಷ್ಟ ಜಾತಿ/ ಪಂಗಡದ ಅಭ್ಯರ್ಥಿಗಳಿಗೆ 4,00,000 ರೂ.ಗಳು ಅಥವಾ ವಾಹನದ ಬೆಲೆಯ 75% ರಷ್ಟು ನೀಡಲಾಗುತ್ತದೆ. ಅಲ್ಪಸಂಖ್ಯಾತರಿಗೆ 3,00,000 ರೂ. ವರೆಗೆ ಅಥವಾ ವಾಹನದ ಬೆಲೆಯ ಶೇ. 50% ರಷ್ಟನ್ನು ನೀಡಲಾಗುತ್ತದೆ. ಇದರೊಂದಿಗೆ ಒಬಿಸಿ ಅಭ್ಯರ್ಥಿಗಳಿಗೆ 3,00,000 ರೂ.ಗಳ ಸಬ್ಸಿಡಿ ನೀಡಲಾಗುತ್ತದೆ. ಇದರೊಂದಿಗೆ ಪ್ಯಾಸೆಂಜರ್ ಆಟೋರಿಕ್ಷಾ ಮೇಲಿನ ಸಬ್ಸಿಡಿ 75,000 ರೂ.ಗಳಾಗಿದೆ.

ಯೋಜನೆಯಡಿ ದೊರೆಯುವ ಸಬ್ಸಿಡಿ ವಿವರಗಳು ಇಂತಿವೆ

ವರ್ಗ ಸಬ್ಸಿಡಿ (ವಾಹನದ ಬೆಲೆಯ ಮೇಲೆ)

  • ಪರಿಶಿಷ್ಟ ಜಾತಿ/ ಪಂಗಡ ರೂ. 4,00,000/- ಅಥವಾ ವಾಹನದ ಬೆಲೆಯ 75% ರಷ್ಟು
  • ಅಲ್ಪಸಂಖ್ಯಾತರು ರೂ. 3,00,000/- ವರೆಗೆ ಅಥವಾ ವಾಹನದ ಬೆಲೆಯ ಶೇಕಡ 50% ರಷ್ಟು
  • ಒಬಿಸಿ ರೂ. 3,00,000/- ವರೆಗೆ ಅಥವಾ ವಾಹನದ ಬೆಲೆಯ ಶೇಕಡ 50% ರಷ್ಟು

ಅರ್ಜಿ ಸಲ್ಲಿಸುವುದು ಹೇಗೆ?

  • ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಡಿಯಲ್ಲಿ ಅರ್ಹ ಫಲಾನುಭವಿಗಳು ಗ್ರಾಮ ಒನ್/ ಬೆಂಗಳೂರು ಒನ್/ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
  • ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ https://kmdconline.karnataka.gov.in/Portal/login ಗೆ ಭೇಟಿ ನೀಡಿ ಲಾಗಿನ್ ಆಗಬೇಕಾಗುತ್ತದೆ.
  • ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ, ನಂತರ ಆಧಾರ್ ಕಾರ್ಡ್ ನಂಬರ್ ಹಾಕಿ ಹಾಗೂ OTP ಭರ್ತಿ ಮಾಡಿ, ಇವಾಗ ನಿಮ್ಮ ಖಾತೆ ರಚನೆ ಆಗುತ್ತದೆ.
  • ನಂತರ ನೀವು “ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಅಡಿಯಲ್ಲಿವಿವಿಧ ಯೋಜನೆಗಳು (2024-25)” ಅದರಲ್ಲಿ “ಸ್ವಾವಲಂಬಿ ಸಾರಥಿ ಯೋಜನೆ” ಯನ್ನ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಅರ್ಜಿದಾರರ ವಿವರಗಳು, ವಾಹನ ವಿವರಗಳು, ಬ್ಯಾಂಕ್ ವಿವರಗಳು, ದಾಖಲೆಗಳು, ಸಾರಾಂಶ, ಹಂತಗಳನ್ನ ಪೂರ್ಣಗೊಳಿಸಿದ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
  • ದಾಖಲೆಗಾಗಿ ಅರ್ಜಿ ಸ್ವೀಕೃತಿಯನ್ನ ಪ್ರಿಂಟ್ ತೆಗೆದುಕೊಳ್ಳಿ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಹಿಂದುಳಿದ ವರ್ಗದವರು
  • ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ವೀರಶೈವ-ಲಿಂಗಾಯತರು
  • ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಒಕ್ಕಲಿಗರು
  • ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ವಿಶ್ವಕರ್ಮ ಸಮುದಾಯದವರು
  • ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಉಪ್ಪಾರ ಸಮುದಾಯದವರು
  • ನಿಜಗುಣ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಅಂಬಿಗರ ಸಮುದಾಯದವರು
  • ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಸವಿತಾ ಸಮುದಾಯದವರು
  • ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಮಡಿವಾಳ ಸಮುದಾಯದವರು
  • ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಮರಾಠ ಸಮುದಾಯದವರು
  • ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೊಳಪಡುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರು

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅರ್ಜಿದಾರರು ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಈ ಕೆಳಕಂಡ ಅಗತ್ಯ ದಾಖಲೆಗಳನ್ನು ಸಲ್ಲಿಸತಕ್ಕದ್ದು.
ಅರ್ಜಿದಾರರು ಹಿಂದುಳಿದ ವರ್ಗಗಳಿಗೆ ಸೇರಿರಬೇಕು ಹಾಗೂ ಸಂಬಂಧಿಸಿದ ತಾಲ್ಲೂಕು ತಹಶೀಲ್ದಾರರು/ಕಂದಾಯ ಅಧಿಕಾರಿಗಳಿಂದ ನಿಗಧಿತ ನಮೂನೆಯಲ್ಲಿ ಪಡೆದ ಜಾತಿ/ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಅರ್ಜಿದಾರರ ವಾಸದ ಪುರಾವೆಗಾಗಿ ಸಕ್ಷಮ ಪ್ರಾಧಿಕಾರಗಳು ನೀಡಿದ ಆಧಾರ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಡಿತರ ಚೀಟಿ.
ಲಘು ವಾಹನ ಚಾಲನಾ ಪರವಾನಗಿಯ ದೃಢೀಕೃತ ಪ್ರತಿ.
ಅರ್ಜಿದಾರರ ಪಾಸ್‌ ಪೋರ್ಟ್‌ ಅಳತೆಯ ಇತ್ತೀಚಿನ ಭಾವಚಿತ್ರ.
ಅರ್ಜಿದಾರರು ನಿರುದ್ಯೋಗಿ ಆಗಿರಬೇಕು. (ಸ್ವಯಂ ಘೋಷಣಾ ಪತ್ರ ಸಲ್ಲಿಸುವುದು).

ಯೋಜನೆಯಡಿ ಏನೆಲ್ಲಾ ಸೌಲಭ್ಯ ಲಭ್ಯ?

ಸಹಾಯಧನ: ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಯುವಕ/ಯುವತಿಯರಲ್ಲಿ ಸ್ವ-ಉದ್ಯೋಗವನ್ನು ಉತ್ತೇಜಿಸಲು ಸರಕು ಸಾಗಾಣಿಕೆ ವಾಹನ ಖರೀದಿ ಉದ್ದೇಶದ ಜೊತೆಗೆ ಸಾರಿಗೆ ವಾಹನ, ಟ್ರ್ಯಾಕ್ಟ್‌ರ್ ಹಾಗೂ ಇತರೆ ವ್ಯಾಪಾರ ಉದ್ದೇಶಗಳಿಗೆ ಘಟಕ ವೆಚ್ಚದಲ್ಲಿ ಶೇ.70 ರಷ್ಟು ಅಥವಾ ಗರಿಷ್ಠ ರೂ.4.00 ಲಕ್ಷಗಳ ಸಹಾಯಧನವಾಗಿದ್ದು, ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
ರಿಯಾಯಿತಿ: ಸಹಾಯದ ಗರಿಷ್ಠ ಮೊತ್ತವು ಘಟಕ ವೆಚ್ಚದ 70% ಆಗಿರುತ್ತದೆ. ಗರಿಷ್ಠ ರೂ.3.50 ಲಕ್ಷಗಳು ಮತ್ತು ಘಟಕ ವೆಚ್ಚದ ಉಳಿದ ಭಾಗವನ್ನು ಸಾಲವಾಗಿ ಬ್ಯಾಂಕ್‌ಗಳು ಮಂಜೂರು ಮಾಡುತ್ತವೆ.
ಮೀಸಲಾತಿ: ಈ ಯೋಜನೆಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರವರ್ಗ-1 ಮತ್ತು 2ಎ ಗೆ ಶೇ.85 ರಷ್ಟು ಪ್ರವರ್ಗ-3ಎ ಮತ್ತು 3ಬಿ ಗೆ ಶೇ.15ರಷ್ಟು ಮೀಸಲಾತಿ ನಿಗದಿಪಡಿಸಿದೆ. ಇನ್ನುಳಿದನಿಗಮಗಳಲ್ಲಿ ಆಯಾ ನಿಗಮದ ವ್ಯಾಪ್ತಿಗೆ ಬರುವ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡತಕ್ಕದ್ದು.

ಸಾಲ ಮಂಜೂರಾತಿಯ ವಿಧಾನ:

ನಿಗಮಗಳಿಂದ ಈ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಅರ್ಜಿದಾರರಿಂದ ಸೇವಾ ಸಿಂಧು ಪೋರ್ಟಲ್‌ ಮುಖಾಂತರ ಆನ್‌ ಲೈನ್‌ ನಲ್ಲಿ ಅರ್ಜಿಗಳನ್ನು ಆಹ್ವಾನಿಸಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗುತ್ತದೆ. ಜಿಲ್ಲಾ ವ್ಯವಸ್ಥಾಪಕರು ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ ಮಾನ್ಯ ಶಾಸಕರು/ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇವರುಗಳ ಅಧ್ಯಕ್ಷತೆಯಲ್ಲಿನ ಆಯ್ಕೆ ಸಮಿತಿಯ ಮುಂದೆ ಮಂಡಿಸಿ, ಆಯಾ ಜಿಲ್ಲೆಗೆ/ವಿಧಾನಸಭಾ ಕ್ಷೇತ್ರಕ್ಕೆ ನಿಗದಿಪಡಿಸಿದ ಗುರಿಯಂತೆ ಆಯ್ಕೆ ಸಮಿತಿಯ ಮೂಲಕ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ವಾಹನ ಖರೀದಿಸುವ ದರಪಟ್ಟಿಯೊಂದಿಗೆ ಸಾಲ ಮಂಜೂರಾತಿಗಾಗಿ ರಾಷ್ಟ್ರೀಕೃತ ಬ್ಯಾಂಕ್‌ ಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ.

ಸದರಿ ಬ್ಯಾಂಕ್‌ ಶಾಖೆಯವರು ಈ ಅರ್ಜಿಗಳನ್ನು ಪರಿಶೀಲಿಸಿ ಸಾಲ ಮಂಜೂರಾತಿಗೆ ಪರಿಗಣಿಸಿ ಸಾಲ ಮಂಜೂರು ಮಾಡಿ, ನಿಗಮಗಳಿಂದ ಸಹಾಯಧನ ಬಿಡುಗಡೆಗೆ ಕೋರಿರುವ ಪ್ರಸ್ತಾವನೆಗಳನ್ನು ಮಂಜೂರಾತಿ ಪತ್ರ/ಕ್ಲೈಮ್‌ ಪತ್ರದೊಂದಿಗೆ ಆನ್‌ ಲೈನ್‌ ನಲ್ಲಿ ಜಿಲ್ಲಾ ವ್ಯವಸ್ಥಾಪಕರಿಗೆ ಕಳುಹಿಸುತ್ತಾರೆ.

ಸಾಲ ವಿತರಣೆ ಮತ್ತು ಘಟಕ ತಪಾಸಣೆ:

ಜಿಲ್ಲಾ ವ್ಯವಸ್ಥಾಪಕರು ಆನ್‌ ಲೈನ್‌ ನಲ್ಲಿ ಸ್ವೀಕರಿಸಿರುವ ದಾಖಲೆಗಳನ್ನು ವಿಸ್ವಾಸ್‌ ತಂತ್ರಾಂಶದಲ್ಲಿ ಅಪ್ಲೋಡ್‌ ಮಾಡಿ L-1, L-2, L-3 ಆದ ವ್ಯವಸ್ಥಾಪಕ ನಿರ್ದೇಶಕರಿಗೆ ಕಳುಹಿಸುವುದು. ಕೇಂದ್ರ ಕಛೇರಿಯಲ್ಲಿ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಪರಿಶೀಲಿಸಿ ಸಾಲ ಮಂಜೂರು ಮಾಡಿದ ಬ್ಯಾಂಕ್‌ ಶಾಖೆಗೆ ಫಲಾನುಭವಿಯು ವಾಹನ ಖರೀದಿಸಿದ ಬಗ್ಗೆ ಆರ್.ಸಿ.ಪುಸ್ತಕ, ಟ್ಯಾಕ್ಸ್‌ ಪಾವತಿ ರಸೀದಿ/ವಿಮಾ ಪಾವತಿ ರಸೀದಿ ಇತ್ಯಾದಿ ದಾಖಲೆಗಳ ಪ್ರತಿಗಳನ್ನು ಒದಗಿಸಿದ ನಂತರ ಅರ್ಜಿದಾರರ ಆಧಾರ್‌ ಸಂಯೋಜನಿತ ಬ್ಯಾಂಕ್‌ ಖಾತೆಗೆ DBT(Direct Benefit Transfer) ಮೂಲಕ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತದೆ.

ವಾಹನ ಸರಬರಾಜುದಾರರು ವಾಹನವನ್ನು ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಸ್ವಾವಲಂಬಿ ಸಾರಥಿ/ಟ್ಯಾಕ್ಸಿ ಉದ್ದೇಶಕ್ಕೆ Yellow Board ಗೆ ನೋಂದಾಯಿಸಿ ವಿತರಿಸಲಾಗುತ್ತದೆ.

ಬ್ಯಾಂಕ್‌ ಸೂಚನೆ ಮೇರೆಗೆ ನೋಂದಣಿ ವೆಚ್ಚ/ವಿಮಾ ಮೊತ್ತವನ್ನು ಫಲಾನುಭವಿಯು ಭರಿಸಬೇಕು. ವಿಮೆಯನ್ನು ಫಲಾನುಭವಿಯು ಪ್ರತಿ ವರ್ಷ ಪರಿಷ್ಕರಿಸಬೇಕು.

ಈ ಯೋಜನೆಯಲ್ಲಿ ಖರೀದಿಸಿದ ವಾಹನವನ್ನು ಸಾಲ ತೀರುವಳಿ ಆಗುವವರೆಗೂ ಮಾರಾಟ ಮಾಡಲು ಅಥವಾ ಟ್ಯಾಕ್ಸಿಯಿಂದ Yellow Board ಸ್ವಂತಕ್ಕೆ (White Board) ಬದಲಿಸಲು ಅವಕಾಶ ಇರುವುದಿಲ್ಲ.

ಸಾಲದ ಮರುಪಾವತಿ ವಿಧಾನ

ಈ ಯೋಜನೆಯಲ್ಲಿ ಬ್ಯಾಂಕುಗಳಿಂದ ಪಡೆದ ಸಾಲವನ್ನು ಬ್ಯಾಂಕ್‌ ಶಾಖೆಯವರು ನಿಗದಿಪಡಿಸಿದ ಕಂತುಗಳನ್ವಯ ಅಸಲು ಮತ್ತು ಬಡ್ಡಿಯನ್ನು ಫಲಾನುಭವಿಗಳು ಬ್ಯಾಂಕ್ ಗಳಿಗೆ ಮರುಪಾವತಿಸಬೇಕು.

ಈ ಯೋಜನೆ ಅನುಷ್ಠಾನಕ್ಕೆ ಕಾಲಕಾಲಕ್ಕೆ ಅಗತ್ಯವಿರುವ ತಿದ್ದುಪಡಿ/ಮಾರ್ಪಾಡು ಅಥವಾ ಸೇರ್ಪಡೆ ಇತ್ಯಾದಿಗಳನ್ನು ಮಾಡಲು ನಿರ್ದೇಶಕ ಮಂಡಳಿಯು ಅಧಿಕಾರ ಹೊಂದಿರುತ್ತದೆ. ಹಾಲಿ ನಿಯಮಗಳಡಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವಾಗ ಉದ್ಭವವಾಗುವ ಸಂಶಯಗಳನ್ನು ನಿವಾರಿಸಲು/ಸ್ಷಷ್ಠೀಕರಣ ನೀಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರ ಹೊಂದಿರುತ್ತಾರೆ.

ಸ್ವಾವಲಂಬಿ ಸಾರಥಿ ಯೋಜನೆಯ ಗುಣಲಕ್ಷಣಗಳು

  • ಯೋಜನೆ ಹೆಸರು:- ಸ್ವಾವಲಂಬಿ ಸಾರಥಿ ಯೋಜನೆ
  • ಪ್ರಯೋಜನಗಳು:- ವಾಹನದ ಖರೀದಿಯ ಮೇಲೆ ಸಬ್ಸಿಡಿ
  • ಫಲಾನುಭವಿಗಳು:- ಅಲ್ಪಸಂಖ್ಯಾತರು, ಇತರೆ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ
  • ನೋಡಲ್‌ ಇಲಾಖೆ:- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
  • ಅಧಿಕೃತ ವೆಬ್‌ಸೈಟ್‌:- https://kmdconline.karnataka.gov.in/Portal/login

Post a Comment

Previous Post Next Post

Top Post Ad

CLOSE ADS
CLOSE ADS
×