ಕೋಲ್ಕತ್ತಾ: ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಪೋಷಕರು ಗದರಿಸದಿದ್ದರೆ ತಮಗೆ ಇಷ್ಟ ಬಂದಂತೆ ಮಾಡುತ್ತಾರೆ. ಅದೇ ಗದರಿಸಿದರೆ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹೇಗೆ ನಿಭಾಯಿಸಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ. ಚಿಕ್ಕ ಚಿಕ್ಕ ವಿಷಯಗಳು ಸಹ ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಎಲ್ಲರ ಮುಂದೆ ಅವರನ್ನು ಗದರಿಸಿದರೆ ಅದನ್ನು ಅವಮಾನವೆಂದು ಪರಿಗಣಿಸುವ ಸಾಧ್ಯತೆಯೂ ಇರುತ್ತದೆ. ಅಷ್ಟೇ ಏಕೆ, ಇದೇ ಕಾರಣಕ್ಕೆ ಅವರು ಹಲವು ಬಾರಿ ತಪ್ಪು ಹೆಜ್ಜೆಗಳನ್ನು ಇಟ್ಟಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ನೋಡುತ್ತಿದ್ದೇವೆ. ಇತ್ತೀಚೆಗೆ ಪಶ್ಚಿಮ ಬಂಗಾಳದ ಪನ್ಸ್ಕುರಾದಲ್ಲಿ ಇದೇ ರೀತಿಯ ಘಟನೆ ನಡೆದಿದೆ. 7 ನೇ ತರಗತಿ ಓದುತ್ತಿದ್ದ ಬಾಲಕನ ತಾಯಿ ಎಲ್ಲರ ಮುಂದೆ ಅವನಿಗೆ ಗದರಿಸಿದ್ದರಿಂದ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಬಾಲಕ ಆ*ತ್ಮಹ*ತ್ಯೆ ಪತ್ರ ಬರೆದಿಟ್ಟಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.
ಆ*ತ್ಮಹ*ತ್ಯೆ ಪತ್ರದಲ್ಲಿ ಏನಿದೆ?
ಬಾಲಕ ಪತ್ರದಲ್ಲಿ, 'ಅಮ್ಮಾ, ನಾನು ಕದ್ದಿಲ್ಲ' ಎಂದು ಬರೆದಿದ್ದನು. ಹುಡುಗನ ಈ ಕೊನೆಯ ಮಾತುಗಳು ಹೃದಯ ವಿದ್ರಾವಕವಾಗಿದೆ. ಅಂದು ಭಾನುವಾರ. ಬಕುಲ್ಡಾ ಪ್ರೌಢಶಾಲೆಯ ವಿದ್ಯಾರ್ಥಿ 13 ವರ್ಷದ ಕೃಷ್ಣೇಂದು ದಾಸ್, ಸಿಹಿತಿಂಡಿ ಅಂಗಡಿಯಿಂದ ಮೂರು ಪ್ಯಾಕೆಟ್ ಚಿಪ್ಸ್ ಕದ್ದ ಎಂದು ಆರೋಪ ಹೊರಿಸಲಾಯಿತು. ಗೋಸೈನ್ಬರ್ ಮಾರುಕಟ್ಟೆಯಲ್ಲಿರುವ ಈ ಸಿಹಿ ಅಂಗಡಿ ಶುಭಂಕರ್ ದೀಕ್ಷಿತ್ ಎಂಬ ನಾಗರಿಕ ಸ್ವಯಂಸೇವಕರಿಗೆ ಸೇರಿತ್ತು. ಶುಭಂಕರ್ ಇಲ್ಲದ ಸಮಯದಲ್ಲಿ ಬಾಲಕ ಅಂಗಡಿಯಿಂದ 3 ಪ್ಯಾಕೆಟ್ ಚಿಪ್ಸ್ ಕದ್ದನು ಎಂದು ಸ್ಥಳೀಯ ಜನರು ಹೇಳುತ್ತಾರೆ.
ಚಿಪ್ಸ್ ಕದ್ದಿದ್ದಕ್ಕೆ ಬಾಲಕನಿಗೆ ಥಳಿತ
ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಚಿಪ್ಸ್ ಪ್ಯಾಕೆಟ್ನೊಂದಿಗೆ ಬಾಲಕ ಇರುವುದನ್ನು ಅಂಗಡಿ ಮಾಲೀಕ ನೋಡಿ ಬಾಲಕನ ಹಿಂದೆ ಓಡಿದನು. ಕಳ್ಳತನದ ಬಗ್ಗೆ ಅವನನ್ನು ವಿಚಾರಣೆ ನಡೆಸಲಾಯಿತು. ಅವನು ಅಂಗಡಿಯವನಿಗೆ ತಲಾ 5 ರೂ.ಗಳಂತೆ ಮೂರು ಪ್ಯಾಕೆಟ್ ಚಿಪ್ಸ್ಗೆ 20 ರೂ.ಗಳನ್ನು ಕೊಟ್ಟನು. ಇದಾದ ನಂತರವೂ ಅಂಗಡಿಯವನು ಒಪ್ಪಲಿಲ್ಲ. ಹಣವನ್ನು ಹಿಂದಿರುಗಿಸುವ ನೆಪದಲ್ಲಿ ಅವನು ಬಾಲಕನನ್ನು ಅಂಗಡಿಗೆ ಕರೆದುಕೊಂಡು ಹೋಗಿ ಥಳಿಸಿದ್ದಾನೆ. ಇಷ್ಟೇ ಅಲ್ಲ, ಅಂಗಡಿಯವನು ಮಗುವನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಗದರಿದ್ದಾನೆ.
ಎಲ್ಲರ ಮುಂದೆ ಹೀಯಾಳಿಸಿದ ತಾಯಿ
ಇದೆಲ್ಲವೂ ಬಾಲಕನಿಗೆ ಆಗಷ್ಟೇ ನಡೆದಿತ್ತು. ಅವನ ತಾಯಿಗೆ ಈ ವಿಷಯ ತಿಳಿದ ತಕ್ಷಣ, ಅವಳು ಮತ್ತೆ ಅವನನ್ನು ಅದೇ ಸಿಹಿತಿಂಡಿ ಅಂಗಡಿಗೆ ಕರೆದೊಯ್ದು ಎಲ್ಲರ ಮುಂದೆ ಗದರಿಸಿದಳು. ಇದರಿಂದ 13 ವರ್ಷದ ಬಾಲಕ ತುಂಬಾ ನೊಂದ. ಮನೆಗೆ ಹಿಂದಿರುಗಿದ ತಕ್ಷಣ ಆತ್ಮಹತ್ಯೆಗೆ ಯತ್ನಿಸಿದನು. ಗಂಭೀರ ಸ್ಥಿತಿಯಲ್ಲಿದ್ದ ಅವನನ್ನು ತಕ್ಷಣ ತಮ್ಲುಕ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ ಗುರುವಾರ ಸಾವನ್ನಪ್ಪಿದನು.
ತಾಯಿ ಗದರಿದ್ದರಿಂದ ನೊಂದುಕೊಂಡ ಬಾಲಕ
ಸಿಹಿತಿಂಡಿ ಅಂಗಡಿಯ ಮಾಲೀಕರ ವರ್ತನೆಯಿಂದಾಗಿ ಮಗು ಇಂತಹ ಕೆಟ್ಟ ತೀರ್ಮಾನ ತೆಗೆದುಕೊಂಡ ಎಂದು ಬಾಲಕನ ಕುಟುಂಬ ಆರೋಪಿಸಿದೆ. ಅಂದಿನಿಂದ ಅಂಗಡಿ ಮಾಲೀಕ ತಲೆಮರೆಸಿಕೊಂಡಿದ್ದಾನೆ. ತಾಯಿ ಸಾರ್ವಜನಿಕವಾಗಿ ಗದರಿದ್ದರಿಂದಲೂ ಮಗುವಿನ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿದೆ. ಇದರಿಂದ ಮಗುವಿಗೆ ತುಂಬಾ ದುಃಖವಾಯಿತು ಎಂದು ಕುಟುಂಬದವರು ಒಪ್ಪಿಕೊಳ್ಳುತ್ತಾರೆ.
ಪೋಷಕರೇ, ಈ ವಿಷಯಗಳ ಬಗ್ಗೆ ಗಮನವಿರಲಿ...
ಸಣ್ಣಪುಟ್ಟ ವಿಷಯಕ್ಕೂ ಎಲ್ಲರ ಮುಂದೆ ಮಕ್ಕಳನ್ನು ಬೈಯುವ ಪೋಷಕರಿಗೆ ಈ ಘಟನೆ ಒಂದು ಪಾಠವಾಗಿದೆ. ಏಕೆಂದರೆ ಈ ವಯಸ್ಸಿನ ಹಂತದಲ್ಲಿ ಮಕ್ಕಳು ತುಂಬಾ ಸೂಕ್ಷ್ಮವಾಗಿರುತ್ತಾರೆ. ಅವರು ಅದನ್ನು ತನಗಾದ ಅವಮಾನವೆಂದೇ ಭಾವಿಸುತ್ತಾರೆ. ಆದ್ದರಿಂದ ಅನೇಕ ಬಾರಿ ಅವರು ದುಡುಕಿ ಇಂತಹ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕೊನೆಗೆ ಕುಟುಂಬಕ್ಕೆ ಪಶ್ಚಾತ್ತಾಪ ಪಡುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ. ಅದಕ್ಕಾಗಿಯೇ ಪೋಷಕರು ತಮ್ಮ ಮಕ್ಕಳನ್ನು ನೋಡಿಕೊಳ್ಳುವಾಗ ತುಂಬಾ ಜಾಗರೂಕರಾಗಿರಬೇಕು. ಅವರಿಗೆ ವಿವರಿಸಿ. ಹಾಗೆಯೇ ಎಲ್ಲರ ಮುಂದೆ ಅವರನ್ನು ಬೈಯಬೇಡಿ. ನೀವು ಗದರಿಸಬೇಕೆಂದರೆ ಅವರನ್ನು ಖಾಸಗಿಯಾಗಿ ಕರೆದು ತಿಳಿಹೇಳಿ. ಆಗ ಅವರು ಅದನ್ನು ಅವಮಾನ ಎಂದು ಭಾವಿಸುವುದಿಲ್ಲ.