BPL Card: ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಸರ್ಕಾರದಿಂದ ಮತ್ತೊಂದು ಬಿಗ್‌ ಗುಡ್‌ ನ್ಯೂಸ್

ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಅದರಲ್ಲೂ ಬಿಪಿಎಲ್‌ ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಸರ್ಕಾರದ ಹೆಚ್ಚು ಸೌಲಭ್ಯಗಳನ್ನು ನೀಡಲಾಗುತ್ತದೆ. ಅಲ್ಲದೆ, ಈ ಕಾರ್ಡುದಾರರಿಗೆ ಇದೀಗ ಮತ್ತೆ ಆಹಾರ ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಗುಡ್‌ ನ್ಯೂಸ್‌ವೊಂದನ್ನು ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬಡ ಜನರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರಕಬೇಕು. ಪಡಿತರ ಚೀಟಿ ಪರಿಷ್ಕರಣೆಗೆ ಹೊರಡಿಸಲಾಗಿರುವ ಮಾರ್ಗಸೂಚಿಗಳ ಪ್ರಕಾರ ಪಡಿತರ ಚೀಟಿಗಳ ಪರಿಷ್ಕರಣೆಗೆ ಕ್ರಮ ಕೈಗೊಳ್ಳುವಂತೆ ಆಹಾರ‌ ಮತ್ತು ನಾಗರಿಕ‌ ಸರಬರಾಜು ಇಲಾಖೆ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ‌ ಏರ್ಪಡಿಸಲಾಗಿದ್ದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಹಾರ ಇಲಾಖಾ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಪಡಿತರ ಚೀಟಿ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹ ಬಿಪಿಎಲ್‌ ಪಡಿತರ ಚೀಟಿದಾರರಿಗೆ ತೊಂದರೆ ಅಗದಂತೆ ನಿಗಾವಹಿಸುವದರ ಜೊತೆಗೆ ಅನರ್ಹ ಬಿಪಿಎಲ್ ಕಾರ್ಡಗಳನ್ನು‌ ಪತ್ತೆಹಚ್ಚಲು ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಬೆಳಗಾವಿ ಕಂದಾಯ ವಿಭಾಗದಲ್ಲಿ ಅಂದಾಜು 13 ಲಕ್ಷ ಫಲಾನುಭವಿಗಳು ಇ-ಕೆವೈಸಿ ನೀಡದೆ‌ ಪಡಿತರ ಪಡೆದಿರುವುದಿಲ್ಲ. ಅಂತಹ ಫಲಾನುಭವಿಗಳನ್ನು ಗುರುತಿಸಿ ಅಂತಹವರ‌ ವಿವರಗಳನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಚುರಪಡಿಸಿ ವರದಿ ನೀಡಬೇಕು. ಫೆಬ್ರವರಿ 20ರೊಳಗೆ ಎಲ್ಲಾ ನ್ಯಾಯಬೆಲೆ‌ ಅಂಗಡಿಗಳಲ್ಲಿ ಥರ್ಮಲ‌್ ಪ್ರಿಂಟರ್‌ಗಳನ್ನು‌ ಅಳವಡಿಕೆ ಮಾಡಲು‌ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಆಹಾರ ಧಾನ್ಯಗಳನ್ನು ಸರಬರಾಜು ಮಾಡುವಂತಹ ಲಾರಿಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯ ಆಗಿದೆ. ಈ ಕುರಿತು ಅಧಿಕಾರಿಗಳು‌ ಪರಿಶೀಲಿಸಬೇಕು. ಬೆಂಬಲ ಬೆಲೆ‌ ಯೋಜನೆ‌ ಅಡಿ ತೆರೆಯಲಾದ ಖರೀದಿ‌‌‌ ಕೇಂದ್ರಗಳಲ್ಲಿ ನಿಯಮಾನುಸಾರ ಆಹಾರ ಧಾನ್ಯಗಳನ್ನು ಖರೀದಿಸಲಾಗುತ್ತಿರುವ‌ ಕುರಿತು ಪರಿಶೀಲಿಸಬೇಕು. ಸರ್ಕಾರ ನಿಗದಿ‌ ಪಡಿಸಿದ ದರದಂತೆ ಬೆಂಬಲ ಬೆಲೆ‌ಯಡಿ ಖರೀದಿಸಬೇಕು. ಈ ಯೋಜನೆಯಡಿ ಯಾವುದೇ ಅವ್ಯವಹಾರಗಳು ನಡೆಯದಂತೆ ನಿಗಾವಹಿಸಲು ತಿಳಿಸಿದರು.

ಆಹಾರ ಮತ್ತು‌ ನಾಗರಿಕ ಸರಬರಾಜು ನಿಗಮದ ಅಧೀನದಲ್ಲಿ ಇರುವಂತಹ ಗೋದಾಮುಗಳನ್ನು ನಿಯಮಿತವಾಗಿ ಪರಿಶೀಲಿಸಿ ಅವಶ್ಯಕತೆಗಿಂತ ಹೆಚ್ಚಿನ ಆಹಾರ ಧಾನ್ಯ ಸಂಗ್ರಹವಾಗದಂತೆ ನಿಗಾವಹಿಸಲು ತಿಳಿಸಿದರು. ಇನ್ನು ಜಿಲ್ಲಾ‌ ಹಾಗೂ ತಾಲೂಕು ಮಟ್ಟದಲ್ಲಿ‌ ಶೀಘ್ರವೆ ಜಾಗೃತ ಸಮಿತಿಗಳನ್ನು ರಚಿಸಲು ಸೂಚಿಸಿದರು.

ಈ ಕುರಿತು ಜಿಲ್ಲಾ‌ ಉಸ್ತುವಾರಿ‌ ಸಚಿವರನ್ನು ಶಾಸಕರ ಜೊತೆ ನಿರಂತರ‌‌ ಸಮನ್ವಯ ಸಾಧಿಸಬೇಕು. ಜೊತೆಗೆ ತಮ್ಮ‌ ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಗ್ಯಾಸ್ ಏಜೆನ್ಸಿಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು. ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಸಾಧನಗಳಲ್ಲಿ ರೈತರಿಗೆ ಮೋಸ ಆಗದಂತೆ ಎಲ್ಲಾ ಸಕ್ಕರೆ‌ ಕಾರ್ಖಾನೆಗಳಲ್ಲಿ ಮಾರ್ಗಸೂಚಿಗಳನ್ವಯ ತೂಕದ‌ ಸಾಧನಗಳನ್ನು ಅಳವಡಿಸಿರುವುದರ‌ ಬಗ್ಗೆ‌ ಖಾತರಿ‌ ಪಡಿಸಿಕೊಳ್ಳುವಂತರ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಸೂಚನೆ ನೀಡಿದರು.

ಆಹಾರ ಇಲಾಖೆ ಆಯುಕ್ತರಾದ ವಾಸವಿ ರೆಡ್ಡಿ ಜೊಸ್ನಾ ಅವರು ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಬೆಳಗಾವಿ ವಿಭಾಗಕ್ಕೆ ಸೆಪ್ಟೆಂಬರ್‌ ಅಂತ್ಯದವರೆಗೆ 2759.02 ಕೋಟಿ ರೂಪಾಯಿ ಡಿಬಿಟಿ ಮೂಲಕ ಸಂದಾಯಿಸಲಾಗಿರುತ್ತದೆ. ಬೆಳಗಾವಿ‌ ಕಂದಾಯ ವಿಭಾಗದಲ್ಲಿ 5,231 ನ್ಯಾಯಬೆಲೆ ಅಂಗಡಿಗಳಿದ್ದು, ಹೊಸ ಪಡಿತರ ಅಂಗಡಿಗಳನ್ನು ತೆರೆಯಲು ಇರುವಂತಹ ಮಾರ್ಗಸೂಚಿಗಳನ್ವಯ ಪ್ರಸ್ತಾವನೆಯನ್ನು ಸಲ್ಲಿಸಲು ತಿಳಿಸಿದರು.

ಕಾನೂನು ಮಾಪನ ಇಲಾಖೆ ನಿಯಂತ್ರಕರಾದ ಅನೀತಾ ಲಕ್ಷ್ಮೀ ಅವರು ಮಾತನಾಡಿ, ಬೆಳಗಾವಿ ಕಂದಾಯ ವಿಭಾಗದಲ್ಲಿ ಜನವರಿ 2025ರ ಅಂತ್ಯದವರೆಗೆ 12.15 ಕೋಟಿ ರಾಜಸ್ವ ಸಂಗ್ರಹ ಮಾಡಲಾಗಿರುತ್ತದೆ. ಒಟ್ಟು 11,418 ತಪಾಸಣೆ ನಡೆಸಿ 2,218 ಮೊಕದ್ದಮೆಗಳನ್ನು ಹೂಡಿ 73.88 ಲಕ್ಷ ರೂಪಾಯಿ ಅಭಿಸಂಧಾನ ದಂಡವನ್ನು ವಿಧಿಸಲಾಗಿದೆ. ಬೆಳಗಾವಿ ಕಂದಾಯ ವಿಭಾಗದಲ್ಲಿ ಪ್ರಸಕ್ತ ವರ್ಷದಲ್ಲಿ 1,821 ಪೆಟ್ರೋಲ್‌ ಪಂಪ್‌ಗಳನ್ನು ತಪಾಸಣೆಗೈದಿದ್ದು, ಈ ಪೈಕಿ 225 ಮೊಕದ್ದಮೆಗಳನ್ನು ಹೂಡಿ 5,55,00 ರೂಪಾಯಿಗಳ ಅಭಿಸಂದಾನ ಶುಲ್ಕವನ್ನು ಸಂಗ್ರಹಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

Previous Post Next Post