RCB Captain: ಆರ್‌ಸಿಬಿ ತಂಡದ ನಾಯಕತ್ವ ಬದಲಾವಣೆ?

RCB Captain: ಆರ್‌ಸಿಬಿ ತಂಡದ ನಾಯಕತ್ವ ಬದಲಾವಣೆ?

ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯ ಸೋಲು ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯವಾಗಿ ತಂಡದ ಮ್ಯಾನೇಜ್‌ಮೆಂಟ್ ಮಾಡುತ್ತಿರುವ ಎಡವಟ್ಟುಗಳು ಅಭಿಮಾನಿಗಳ ಕೋಪ ಹೆಚ್ಚಾಗಲು ಕಾರಣವಾಗಿದೆ.



ಸರಿಯಾದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವಲ್ಲಿ ಪದೇ ಪದೇ ಎಡವುತ್ತಿರುವುದು, ಸೋಲಿತ್ತಿದ್ದರೂ ತಂಡದಲ್ಲಿ ಬದಲಾವಣೆ ಮಾಡದೇ ಅದೇ ಆಟಗಾರರ ಜೊತೆ ಆಡುತ್ತಿರುವುದು. ಉತ್ತಮವಾಗಿ ಆಡುವ ಆಟಗಾರರನ್ನು ಬೆಂಚ್ ಕಾಯುವಂತೆ ಮಾಡುತ್ತಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ನಡುವೆ ಆರ್‌ಸಿಬಿ ಬ್ಯಾಟಿಂಗ್ ಮಾಡಿದ ಬಳಿಕ ಮಾತನಾಡುತ್ತಿದ್ದ ವಿರಾಟ್ ಕೊಹ್ಲಿ ನೀಡಿದ ಹೇಳಿಕೆ ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಯಾರು ಬರುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿರಾಟ್ ಕೊಹ್ಲಿ "ನನಗೆ ಅದರ ಬಗ್ಗೆ ಐಡಿಯಾ ಇಲ್ಲ, ನಾನು ಆ ಹಂತವನ್ನು ದಾಟಿ ಮುಂದೆ ಬಂದಿದ್ದೇನೆ" ಎಂದು ಹೇಳಿದ್ದಾರೆ

ಕೊಹ್ಲಿ ಮಾತು ಕೇಳುತ್ತಿಲ್ವಾ?

ಕೊಹ್ಲಿ ಅವರ ಹೇಳಿಕೆ ಗಮನಿಸಿದರೆ, ತಂಡದ ಆಯ್ಕೆಯಲ್ಲಿ ಕೊಹ್ಲಿಯವರ ಪಾತ್ರ ಏನೂ ಇಲ್ಲವಾ ಎನ್ನುವ ಪ್ರಶ್ನೆ ಮೂಡುತ್ತದೆ. ಫಾಫ್ ಡುಪ್ಲೆಸಿಸ್ ಕಳೆದ ಎರಡು ಆವೃತ್ತಿಗಳಲ್ಲಿ ಉತ್ತಮ ನಾಯಕತ್ವ ವಹಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರ ನಾಯಕತ್ವ ಕೂಡ ಅಷ್ಟು ಪರಿಣಾಮಕಾರಿಯಾಗಿಲ್ಲ.

ಈಗಾಗಲೇ ಆಡಿರುವ 5 ಪಂದ್ಯಗಳಲ್ಲಿ ಆರ್‌ಸಿಬಿ 4 ರಲ್ಲಿ ಸೋತಿದ್ದು, ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಪ್ಲೇ ಆಫ್ ಹಂತಕ್ಕೆ ತಲುಪಬೇಕಾದರೆ ಉಳಿದ 9 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನಾದರೂ ಗೆಲ್ಲಬೇಕಿದೆ.

ನಾಯಕತ್ವ ಬದಲಾವಣೆ ಮಾಡ್ತಾರಾ?

ತಂಡದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕು ಎನ್ನುವ ಕೂಗು ಕೂಡ ಅಭಿಮಾನಿಗಳಿಂದ ಕೇಳಿ ಬಂದಿದೆ. ವಿರಾಟ್ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲಿ, ಡುಪ್ಲೆಸಿಸ್ ಬದಲಾಗಿ ವಿಲ್ ಜ್ಯಾಕ್ಸ್‌ಗೆ ಅವಕಾಶ ಕೊಡಿ ಎಂದು ಆಗ್ರಹಿಸಿದ್ದಾರೆ.

ಮತ್ತೆ ಕೆಲವರು ದಿನೇಶ್ ಕಾರ್ತಿಕ್ ಅವರಿಗೆ ನಾಯಕತ್ವ ಕೊಡಲಿ, ಆಗ ನಾಲ್ವರು ವಿದೇಶಿ ಆಟಗಾರರಲ್ಲಿ ಬದಲಾವಣೆ ಮಾಡಲು ತಂಡಕ್ಕೆ ಅನುಕೂಲ ಆಗುತ್ತದೆ. ಡುಪ್ಲೆಸಿಸ್‌ಗೆ ನಾಯಕತ್ವ ಹೊರೆ ಇಳಿಸಿದರೆ, ಅವರು ಸ್ಫೋಟಕ ಬ್ಯಾಟಿಂಗ್ ಆಡಬಹುದು ಎಂದು ಸಲಹೆ ಕೊಟ್ಟಿದ್ದಾರೆ.

ಆದರೆ ಮ್ಯಾನೇಜ್‌ಮೆಂಟ್ ನಾಯಕತ್ವ ಬದಲಾವಣೆ ಮಾಡುವ ಸಾಹಸಕ್ಕೆ ಮುಂದಾಗುವ ಸಾಧ್ಯತೆ ಬಹಳ ಕಡಿಮೆ ಇದೆ. ಫಾಫ್ ಉತ್ತಮ ನಾಯಕ, ಆದರೆ ಅವರಿಗೆ ಎಲ್ಲ ಆಟಗಾರರಿಂದ ಸಹಕಾರ ಬೇಕಿದೆ. ಮುಖ್ಯವಾಗಿ ಪ್ಲೇಯಿಂಗ್ ಇಲೆವೆನ್ ಆಯ್ಕೆಯೇ ಗೊಂದಲವಾಗಿದೆ.

ಲೊಮ್ರೋರ್, ವೈಶಾಖ್ ಅವರಂತಹ ಮ್ಯಾಚ್ ಗೆಲ್ಲಿಸುವ ಆಟಗಾರರನ್ನು ಬೆಂಚ್‌ನಲ್ಲಿ ಕೂರಿಸಿದರೆ ಪಂದ್ಯ ಗೆಲ್ಲೋದಾದ್ರು ಹೇಗೆ ಎಂದು ಪ್ರಶ್ನೆ ಮಾಡಲಾಗುತ್ತಿದೆ. ಆರ್‌ಸಿಬಿ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುತ್ತಿದೆ. ಈವರೆಗೂ ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು, ಮುಂಬೈ ವಿರುದ್ಧ ಗೆದ್ದರೆ ಮಾತ್ರ ಮುಂದಿನ ಹಂತಕ್ಕೆ ಪ್ರವೇಶಿಸುವ ಬಗ್ಗೆ ಯೋಚನೆ ಮಾಡಬಹುದು.

Post a Comment

Previous Post Next Post
CLOSE ADS
CLOSE ADS
×