Ration Card: ಏಪ್ರಿಲ್ 1ರಿಂದ ರೇಷನ್‌ ಕಾರ್ಡ್ ವಿತರಣೆ; ಮಾಹಿತಿ ವಿವರ

By SVR Creations

ರಾಜ್ಯದಲ್ಲಿ ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಮಾರ್ಚ್ 31 ರೊಳಗೆ ಪರಿಶೀಲನೆ ನಡೆಸಿ ಏಪ್ರಿಲ್ 1ರಿಂದ ವಿತರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.



ವಿಧಾನಸಭೆಯ ಪ್ರಶ್ನೋತ್ತರದದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಬಂತು ಎಂದು ಹಿಂದಿನ ಸರ್ಕಾರ 2.95 ಲಕ್ಷ ಕಾರ್ಡ್ಗಳನ್ನು ವಿತರಿಸದೇ ಬಾಕಿ ಉಳಿಸಿಕೊಂಡಿತ್ತು. ಆ ಕಾರ್ಡ್‌ಗಳನ್ನು ಮತ್ತೆ ಪರಿಶೀಲನೆ ಮಾಡಿ, ಎಪಿಎಲ್‌ ಯಾವುದು, ಬಿಪಿಎಲ್‌ ಯಾವುದು ಎಂದು ಪರಿಶೀಲನೆ ನಡೆಸಿ ಬಂದ ತಕ್ಷಣ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದರು.

ಇಲ್ಲಿಯವರೆಗೆ 57 ಸಾವಿರ ಹೊಸ ಕಾರ್ಡ್‌ಗಳನ್ನು ನೀಡಲಾಗಿದೆ. ಇಲ್ಲಿಯವರೆಗೂ ಮೆಡಿಕಲ್ ಫೆಸಿಲಿಟಿಗಾಗಿ ಯಾರು ಅರ್ಜಿ ಕೊಟ್ಟಿದ್ದಾರೆ. ಅಂತವರಿಗೆ ತಕ್ಷಣ ಕಾರ್ಡ್ ವಿತರಿಸಲು ಸೂಚಿಸಿದ್ದೇವೆ. ಈ ಮೂಲಕ 744 ಜನರಿಗೆ ಆರೋಗ್ಯ ತುರ್ತು ಕಾರಣಕ್ಕೆ ಕಾರ್ಡ್ ಕೊಟ್ಟಿದ್ದೇವೆ. ಉಳಿದಂತಹ ಕಾರ್ಡ್‌ಗಳನ್ನು ಮುಂದಿನ ಮಾರ್ಚ್ 31ರೊಳಗೆ ಪರಿಶೀಲನೆ ಮಾಡಿ ವಿತರಿಸುವ ತೀರ್ಮಾನ ಕೈಗೊಂಡಿದ್ದೇವೆ. ಜೊತೆಗೆ ಆದೇಶವನ್ನು ಕೂಡ ಕೊಟ್ಟಿದ್ದೇವೆ ಎಂದರು.

ಮಾರ್ಚ್ 31 ರೊಳಗೆ ಎಲ್ಲಾ 2.95 ಲಕ್ಷ ಕಾರ್ಡ್ಗಳನ್ನು ನಾವು ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತೇವೆ. ಈ ಕೆಲಸ ಮುಗಿದ ನಂತರ ಹೊಸ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಅದರಲ್ಲಿ ನಮ್ಮ ಸಭಾಧ್ಯಕ್ಷರೇ ಕೇಳಿದ ಹಾಗೆ ಎಪಿಎಲ್‌ ಕಾರ್ಡ್‌ ಕೊಡಲು ಏನು ಸಮಸ್ಯೆ ಎಂದಿದ್ದಾರೆ. ಅದನ್ನೂ ಕೂಡ ಸರಿ ಪಡಿಸುತ್ತೇವೆ. ಏಪ್ರಿಲ್ 1ರ ನಂತರ ಬಂದ ಅರ್ಜಿಗಳು ಮೂರು ತಿಂಗಳಲ್ಲಿ ಪರಿಶೀಲನೆ ನಡೆಸಿ ವಿತರಣೆ ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ವಿವರಿಸಿದರು.

ಇನ್ನು 5 ಕೆಜಿ ಅಕ್ಕಿಯ ಹಣ ಬರದವರಿಗೆ ಪರಿಹಾರ ಕೊಡುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದರೆ 100ಕ್ಕೆ 90ರಷ್ಟು ಪಡಿತರ ಕಾರ್ಡ್‌ದಾರರಿಗೆ ಐದು ಕೆಜಿ ಅಕ್ಕಿಯ ಹಣ ಕೊಟ್ಟಿದ್ದೇವೆ. ಶೇ5 ರಷ್ಟು ಏರುಪೇರು ಇದರಲ್ಲಿ ಇದೆ. ಅದನ್ನೂ ಸರಿಪಡಿಸುತ್ತೇವೆ. ಹಾಗೂ ಹೊಸ ಕಾರ್ಡ್ಗಳಿಗೆ ಅರ್ಜಿ ಬಂದರೆ ತಡ ಮಾಡದೆ ವಿತರಣೆ ಮಾಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.