ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕೌಶಲ್ಯಾಭವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ವತಿಯಿಂದ 'ಬೃಹತ್ ಉದ್ಯೋಗ ಮೇಳ 2024' ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಫೆಬ್ರವರಿ 26 ಹಾಗೂ 27 ರಂದು 'ಯುವ ಸಮೃದ್ಧಿ ಸಮ್ಮೇಳನ' ರಾಜ್ಯ ಮಟ್ಟದ ಯುವ 'ಬೃಹತ್ ಉದ್ಯೋಗ ಮೇಳ 2024'ವನ್ನು ಹಮ್ಮಿಕೊಳ್ಳಲಾಗಿದೆ. ಈ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ನಿರುದ್ಯೋಗಿಗಳು ಪಾಲ್ಗೊಂಡು ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಮಂಡ್ಯ ಜಿಲ್ಲೆಯ ಜಿಲ್ಳಾಧಿಕಾರಿ ಡಾ.ಕುಮಾರ್ ಮಾಹಿತಿ ನೀಡಿದರು.
ಇತ್ತೀಚೆಗೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 'ಜಿಲ್ಲಾ ಕೌಶಲ್ಯ ಸಮಿತಿಯ' ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಿದ್ದರ ಕುರಿತು ಅಧಿಕೃತ ಮಾಹಿತಿ ನೀಡಿದರು.
ಮೇಳದಲ್ಲಿ 500ಕ್ಕೂ ಕಂಪನಿಗಳು
ಈ ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ಮೂಲೆ ಮೂಲೆಗಳಿಂದ 50 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮತ್ತು ರಾಜ್ಯ ವಲಯದಿಂದ 500ಕ್ಕೂ ಹೆಚ್ಚಿನ ಪ್ರತಿಷ್ಟಿತ ಉದ್ಯೋಗದಾತ ಕಂಪನಿಗಳು ಪಾಲ್ಗೊಳ್ಳಲಿವೆ. ಶೈಕ್ಷಣಿಕ ವ್ಯಾಸಂಗ ಮುಗಿದು ಕೆಲಸ ಸಿಗದೇ ಪರದಾಡುತ್ತಿರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಈ ಕೂಡಲೇ ಹೆಸರು ನೋಂದಾಯಿಸಿಕೊಳ್ಳಿ.
ನೋಂದಣಿ ಮಾಹಿತಿ
ಆಸಕ್ತರು ಹೆಸರು ನೋಂದಾಯಿಸಿಕೊಳ್ಳಲು http://udyogamele.silkllconnect.kaushalkar.com/candidcateRegistration ನಗರ ಸ್ಥಳೀಯ ಸಂಸ್ಥೆಗಳು, ತಾಲ್ಲೂಕು ಮಟ್ಟದ ಕಛೇರಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಹೆಚ್ಚು ಪ್ರಚಾರ ಕೊಟ್ಟು ಈ ಮೇಳಕ್ಕೆ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ಇವರಷ್ಟೇ ಅಲ್ಲದೇ ಗ್ರಾಮಗಳಲ್ಲಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಪನ್ಮೂಲ ವ್ಯಕ್ತಗಳ ಮುಖೇನ ಯುವಕರಿಗೆ ಮಾಹಿತಿ ನೀಡಬೇಕು. ಆ ಮೂಲಕ ಉದ್ದೇಶಿತ ಉದ್ಯೋಗ ಮೇಳಕ್ಕೆ ಸಜ್ಜುಗೊಳಿಸಬೇಕು ಎಂದು ಮನವಿ ಮಾಡಿದರು.
ವಿಫುಲ ಉದ್ಯೋಗ ಅವಕಾಶ
ಈ ಬೃಹತ್ ಮೇಳದಲ್ಲಿ SSLC, PUC, ವಿವಿಧ ಪದವಿ ಪಡೆದವರು ಸೇರಿದಂತೆ ಎಲ್ಲಾ ರೀತಿಯ ಉನ್ನತ ಮಟ್ಟದ ವ್ಯಾಸಂಗ ಮಾಡಿದವರು ಪಾಲ್ಗೊಳ್ಳಬಹುದು. ಉದ್ಯೋಗ ಅರಸುತ್ತಿರುವವರಿಗೆ ಇದೊಂದು ವಿಫುಲ ಅವಕಾಶವಾಗಿದೆ. ಕೂಡಲೇ ಆನ್ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
ಇನ್ನೂ ಪದವಿಯಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು, ಪದವಿ ಪೂರೈಸಿದವರು ಕೌಶಲ್ಯ ತರಬೇತಿ ಪಡೆಯಲು ಇಚ್ಛಿಸಿದಲ್ಲಿ ನೋಂದಾಯಿಸಿಕೊಳ್ಳಿ. ಈ ಮೇಳ ಕುರಿತು ಪೋಸ್ಟರ್ ಅನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಾಯಿತು.
ಜಿಲ್ಲಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ನಗರಾಭಿವೃದ್ಧಿ ಕೋಶದ ಅಧಿಕಾರಿಗಳು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
