ಕರ್ನಾಟಕ ಬಜೆಟ್ 2024: ಸಿಎಂ ಸಿದ್ದರಾಮಯ್ಯ ಪ್ರಕಟಿಸಿದ ಹೊಸ ಯೋಜನೆ, ಕಾರ್ಯಕ್ರಮಗಳೇನು?

Karnataka Budget 2024: ಪ್ರತಿ ಬಾರಿಯ ಬಜೆಟ್‌ನಂತೆ ಈ ಬಾರಿ ಕೂಡಾ ಸಿಎಂ ಸಿದ್ದರಾಮಯ್ಯ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಹಲವು ಹೊಸ ಅಭಿವೃದ್ದಿ ಕಾಮಗಾರಿಗಳನ್ನೂ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಹಿರಿಯ ನಾಗರಿಕರಿಗಾಗಿ ಅನ್ನ ಸುವಿಧಾ, ರೈತರಿಗಾಗಿ ಸಮೃದ್ದಿ ಯೋಜನೆ, ಮೀನುಗಾರರಿಗಾಗಿ ಸಮುದ್ರ ಆಂಬ್ಯುಲೆನ್ಸ್ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಅಮೃತ್‌ನಂಥಾ ಯೋಜನೆಗಳ ಎರಡನೇ ಆವೃತ್ತಿಯನ್ನೂ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.



ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡಿದ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳು ಹಾಗೂ ಹಲವು ಅಭಿವೃದ್ದಿ ಕಾಮಗಾರಿಗಳ ಘೋಷಣೆ ಆಗಿದೆ. ಕರ್ನಾಟಕ ಬಜೆಟ್‌ನಲ್ಲಿ ಘೋಷಣೆಯಾದ ವಲಯವಾರು ಹೊಸ ಯೋಜನೆಗಳು ಹಾಗೂ ಕಾಮಗಾರಿಗಳ ವಿವರ ಇಂತಿದೆ:

ಕೃಷಿ ವಲಯಕ್ಕೆ ಹೊಸತೇನು?

  • ವಿವಿಧ ರೈತ ಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಉತ್ತೇಜಿಸುವ ಕರ್ನಾಟಕ ರೈತ ಸಮೃದ್ದಿ ಯೋಜನೆ ಜಾರಿ
  • ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ದಿ ಪ್ರಾಧಿಕಾರ ರಚನೆ
  • ಸಿರಿ ಧಾನ್ಯ ಉತ್ಪನ್ನಗಳನ್ನು ಕೈಗೆಟಕುವ ದರದಲ್ಲಿ ಒದಗಿಸಲು ನಮ್ಮ ಮಿಲ್ಲೆಟ್ ಕಾರ್ಯಕ್ರಮ
  • ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ, ಬೆಂಗಳುರು ಗ್ರಾಮಾಂತರ ಜಿಲ್ಲೆಯ ಪೂಜೇನಹಳ್ಳಿಯಲ್ಲಿ ಆಹಾರ ಪಾರ್ಕ್‌ ಸ್ಥಾಪನೆ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್‌ ಅಭಿವೃದ್ದಿ
  • ವಿಜಯಪುರ ಜಿಲ್ಲೆಯ ಅಲಮೇಲದಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆ
  • ಕಬ್ಬು ಬೆಳೆಗಾರರಿಗೆ ತೂಕದಲ್ಲಾಗುವ ಮೋಸ ತಡೆಗಟ್ಟಲು ಎಲ್ಲಾ ಸಕ್ಕರೆ ಕಾರ್ಖಾನೆಗಳ ಬಳಿ ಎಪಿಎಂಸಿ ಮೂಲಕ ವೇ ಬ್ರಿಡ್ಜ್‌ ಸ್ಥಾಪನೆ
  • 80 ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸಲು ಅನ್ನ-ಸುವಿಧಾ ಯೋಜನೆ ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರ ತೀರ್ಮಾನಿಸಿದೆ.

ಮೀನುಗಾರಿಕೆ ವಲಯಕ್ಕೇನು?

  • ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳು
  • ಮೀನುಗಾರರ ರಕ್ಷಣೆಗೆ ಸಮುದ್ರ ಆಂಬ್ಯುಲೆನ್ಸ್ ಖರೀದಿಗೆ 7 ಕೋಟಿ ರೂ.
  • ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿ ಮೀನುಗಾರರ ಪರಿಹಾರದ ರಾಜ್ಯದ ಪಾಲು 3 ಸಾವಿರ ರೂ.ಗೆ ಹೆಚ್ಚಳ
  • 10 ಸಾವಿರ ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಿಸಲು ಸಹಾಯಧನ

ಜಲ ಸಂಪನ್ಮೂಲಾಭಿವೃದ್ದಿಗೆ ಹೊಸತೇನು?

  • ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಅನುಷ್ಠಾನಕ್ಕೆ ಪ್ರತ್ಯೇಕ ಯೋಜನಾ ವಿಭಾಗ ಸ್ಥಾಪನೆ
  • ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಯೋಜನೆಗೆ ವರದಿ ಸಿದ್ದ
  • ಕೆಆರ್‌ಎಸ್‌ನ ಬೃಂದಾವನ ಉದ್ಯಾನವನ ವಿಶ್ವ ದರ್ಜೆಯ ಪ್ರವಾಸಿ ತಾಣವಾಗಿ ಉನ್ನತೀಕರಣ

ಆರೋಗ್ಯ ವಲಯಕ್ಕೇನು?

  • ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ
  • ಪ್ರತಿ ಜಿಲ್ಲೆಯಲ್ಲೂ ಒಂದು ಡೇ - ಕೇರ್ ಕಿಮೋಥೆರಪಿ ಕೇಂದ್ರ ಸ್ಥಾಪನೆ
  • 13 ಜಿಲ್ಲಾ ಆಸ್ಪತ್ರೆಗಳಿಗೆ ಅಗ್ನಿಶಾಮಕ ವ್ಯವಸ್ಥೆ
  • ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 2 ವರ್ಷಗಳಲ್ಲಿ 50 ಹೊಸ ರಕ್ತ ಶೇಖರಣಾ ಘಟಕಗಳ ಸ್ಥಾಪನೆ
  • ಬೆಂಗಳೂರಿನಲ್ಲಿ 2 ವರ್ಷಗಳಲ್ಲಿ 430 ಪ್ರಯೋಗಾಲಯಗಳ ಸ್ಥಾಪನೆ

ಕಾರ್ಮಿಕರಿಗಾಗಿ

  • ಝೊಮ್ಯಾಟೋ, ಸ್ವಿಗ್ಗಿ ಸೇರಿದಂತೆ ಆನ್‌ಲೈನ್ ಡಿಲಿವರಿ ಮಾಡುವ ಗಿಗ್ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಕಾರ್ಯಕ್ರಮ
  • ಆಶಾದೀಪ ಯೋಜನೆಯಡಿ ತರಬೇತಿ ಪಡೆಯುತ್ತಿರುವ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಸೌಲಭ್ಯ ವಿಸ್ತರಣೆ
  • ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರೇ ನಡೆಸುವ ಕೆಫೆ ಸಂಜೀವಿನಿ ಕ್ಯಾಂಟೀನ್‌ಗಳ ಸ್ಥಾಪನೆ. 2,500 ಕಾಫಿ ಕಿಯಾಸ್ಕ್‌ ಸ್ಥಾಪನೆ

ಮೂಲ ಸೌಕರ್ಯ, ಗ್ರಾಮೀಣಾಭಿವೃದ್ದಿಗಾಗಿ..

  • ಪ್ರಗತಿಪಥ ಯೋಜನೆಯಡಿ 5,200 ಕೋಟಿ ರ. ವೆಚ್ಚದಲ್ಲಿ 189 ವಿಧಾನಸಭಾ ಕ್ಷೇತ್ರಗಳ ಒಟ್ಟು 9,450 ಕಿ. ಮೀ. ರಸ್ತೆ ಅಭಿವೃದ್ದಿ
  • ಕಲ್ಯಾಣ ಪಥ ಯೋಜನೆ ಅಡಿ ಕಲ್ಯಾಣ ಕರ್ನಾಟಕದ 38 ವಿಧಾನಸಭಾ ಕ್ಷೇತ್ರಗಳಲ್ಲಿ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ 1,150 ಕಿ. ಮೀ. ರಸ್ತೆ ಅಭಿವೃದ್ಧಿ
  • 50 ಪಂಚಾಯ್ತಿಗಳಲ್ಲಿ ಸೋಲಾರ್ ದೀಪ ಅಳವಡಿಕೆ, 200 ಪಂಚಾಯ್ತಿಗಳಲ್ಲಿ ಬೀದಿದೀಪಗಳ ಮೀಟರಿಂಗ್‌

ಬೆಂಗಳೂರಿಗೆ ಹೊಸ ಯೋಜನೆಗಳು

  • ರಾಜಧಾನಿಯನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ದಿಪಡಿಸಲು ಬ್ರಾಂಡ್ ಬೆಂಗಳೂರು ಪರಿಕಲ್ಪನೆ ಜಾರಿ
  • ಬೆಂಗಳೂರಿನ 28 ಜಂಕ್ಷನ್‌ಗಳಲ್ಲಿ ಏರಿಯಾ ಟ್ರಾಫಿಕ್ ಸಿಗ್ನಲ್ ನಿಯಂತ್ರಣ ವ್ಯವಸ್ಥೆ ಅಳವಡಿಕೆ
  • ಹೆಬ್ಬಾಳ ಜಂಕ್ಷನ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣ
  • ಪೆರಿಫೆರಲ್ ರಿಂಗ್ ರೋಡ್‌ ಅನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌ ಎಂಬ ಹೊಸ ಪರಿಕಲ್ಪನೆಯಲ್ಲಿ ಅಭಿವೃದ್ಧಿ
  • ಬೆಂಗಳೂರಿನಲ್ಲಿ 250 ಮೀಟರ್ ಎತ್ತರದ ಸ್ಕೈಡೆಕ್ ನಿರ್ಮಾಣ

ನಗರಾಭಿವೃದ್ದಿಗೆ ಹೊಸತೇನು?

  • ಬೆಂಗಳೂರು ಸೇರಿದಂತೆ 10 ಪಾಲಿಕೆಗಳಲ್ಲಿ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2.0 ಜಾರಿ
  • ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ತುಮಕೂರಿನ ವಸಂತನರಸಾಪುರ, ಕೆಜಿಎಫ್‌ ಮತ್ತು ಬಳ್ಳಾರಿ ನಗರಗಳ ಬಳಿ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ದಿ
  • ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ, ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪ ನಗರ ಟೌನ್‌ಶಿಪ್ ಅಭಿವೃದ್ದಿ.
  • ಮೈಸೂರಿನಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲು ವರದಿ


Previous Post Next Post